ಏ 30 ರಂದು ರಾಜ್ಯದಲ್ಲಿ ನಕ್ಸಲೀಯರ ದಾಳಿ ?
ಬೆಂಗಳೂರು, ಏ. 20 : ರಾಜ್ಯದ ಎರಡನೇ ಹಂತದ ಚುನಾವಣೆಯ ದಿನವಾದ ಎಪ್ರಿಲ್ 30 ರಂದು ಶಿವಮೊಗ್ಗ, ಉಡುಪಿ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ನಕ್ಸಲೀಯರು ಭಾರಿ ಪ್ರಮಾಣದಲ್ಲಿ ದಾಳಿ ನಡೆಸುವ ಸಾಧ್ಯತೆಗಳಿವೆ ಪೊಲೀಸ್ ಮೂಲದಿಂದ ತಿಳಿದು ಬಂದಿದೆ. ಛತ್ತೀಸಗಢ್ ಮತ್ತು ಒರಿಸ್ಸಾದಿಂದ ಸುಮಾರು 25 ನಕ್ಷಲೀಯರು ಭಾರಿ ಪ್ರಮಾಣದ ಸ್ಪೋಟಕ ಮತ್ತು ಎಕೆ 47 ಪಿಸ್ತೂಲುಗಳೊಂದಿಗೆ ಶಿವಮೊಗ್ಗ ಪ್ರವೇಶಿಸಿದ್ದಾರೆ೦ದು ತಿಳಿದುಬಂದಿದೆ ಎಂದು ಮಿಡ್ ಡೇ ವರದಿ ಮಾಡಿದೆ.
ಈ ರಾಜ್ಯದಿಂದ ಬಂದ 'ರೆಡ್ ಕ್ಯಾರಿಡಾರ ಜಂಗ್ಲಿ'ಎನ್ನುವ ನಕ್ಷಲೀಯರು ಮಾಯೋ ಉಗ್ರವಾದಿಗಳ ಆದೇಶದಂತೆ ದಾಳಿ ನಡೆಸಲಿದ್ದು, ಮುಖ್ಯವಾಗಿ ಮುಖ್ಯಮಂತ್ರಿಯವರ ಪುತ್ರ ಸ್ಪರ್ಧಿಸುವ ಶಿವಮೊಗ್ಗ ಮತ್ತು ರಾಜ್ಯ ಬಿಜೆಪಿ ಅಧ್ಯಕ್ಷ ಸದಾನಂದಗೌಡ ಸ್ಪರ್ಧಿಸುವ ಉಡುಪಿ - ಚಿಕ್ಕಮಗಳೂರು ಕ್ಷೇತ್ರದ ಮೇಲೆ ಇವರ ಕಣ್ಣಿದೆ ಎಂದು ಪೋಲಿಸ್ ಮೂಲಗಳು ತಿಳಿಸಿವೆ.
ಇವರ ಪ್ರಕಾರ ನಕ್ಸಲೀಯರು ಈ ಎರಡೂ ಕ್ಷೇತ್ರದ ಹತ್ತು ಕಡೆ ಎಕೆ 47 ಪಿಸ್ತೂಲ್ ಮತ್ತು ಭೂಮಿಯಲ್ಲಿ ಸ್ಪೋಟಕಗಳನ್ನು ಹುದುಗಿಸಿಟ್ಟಿದ್ದು, ಶಿವಮೊಗ್ಗ ಜಿಲ್ಲೆಯ ಆಗುಂಬೆ, ತೀರ್ಥಹಳ್ಳಿ , ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಮತ್ತು ಉಡುಪಿ ಜಿಲ್ಲೆಯ ಹೆಬ್ರಿ, ಹಿರಿಯಡ್ಕ ಇವರ ಪ್ರಮುಖ ಗುರಿಯಾಗಿದೆ ಎಂದು ಪೋಲಿಸ್ ಮೂಲಗಳಿಂದ ತಿಳಿದುಬಂದಿದೆ.
ಈ ಮಧ್ಯೆ ನಕ್ಸಲೀಯರು ಈ ಎಲ್ಲಾ ಪ್ರದೇಶಗಳಲ್ಲಿ ಚುನಾವಣೆ ಬಹಿಷ್ಕರಿಸುವಂತೆ ಕರಪತ್ರ ಹಂಚಿದ್ದರೆಂದು ವರದಿಯಾಗಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ನಕ್ಸಲೀಯರ ಬೆದರಿಕೆಯ ನಡುವೆಯೂ 82% ಮತದಾನ ನಡೆದಿತ್ತು.
ಗೃಹ ಸಚಿವ ಆಚಾರ್ಯ ಹೇಳಿಕೆ
ಈ ಕುರಿತು ಪ್ರತಿಕ್ರಿಯೆ ನೀಡಿರುವ ಗೃಹ ಸಚಿವ ಆಚಾರ್ಯ, ನಕ್ಸಲರ ಬಲಗು೦ದಿದೆ. ನಮಗೆ ಬಂದ ಮಾಹಿತಿಯಂತೆ ಗೃಹ ಖಾತೆ ಈ ಸಂಬಂಧ ಸಂಪೂರ್ಣ ಕಾರ್ಯೋನ್ಮುಖವಾಗಿದೆ. ಈ ಎಲ್ಲಾ ಪ್ರದೇಶಗಳಲ್ಲೂ ವಿಶೇಷ ಭದ್ರತೆಯನ್ನು ನೀಡಲಾಗುವುದು, ಜನರು ಯಾವುದೇ ಬೆದರಿಕೆಗಳಿಗೆ ಭಯಪಡುವ ಅವಶ್ಯಕತೆಯಿಲ್ಲ ಎಂದು ಹೇಳಿಕೆ ನೀಡಿದ್ದಾರೆ.
ಉಡುಪಿ ಜಿಲ್ಲಾ ಪೋಲಿಸ್ ಅಧೀಕ್ಷಕ ಸುರೇಶ್ ಪವಾರ್ ಈ ಸಂಬಂಧ ಹೇಳಿಕೆ ನೀಡಿದ್ದು, ಈ ಭಾಗದಲ್ಲಿ 23 ಜನರಷ್ಟೇ ಇದ್ದ ನಕ್ಸಲೀಯರ ಸಂಖ್ಯೆ ಈಗ 70 ಕ್ಕೆ ಏರಿದೆ. ಇದರ ಬಗ್ಗೆ ಈಗಾಗಲೆ ರಾಜ್ಯದ ಗ್ರಹಮಂತ್ರಿಯವರ ಜೊತೆ ಚರ್ಚಿಸಿದ್ದೇವೆ. ಗುಪ್ತಚರ ಇಲಾಖೆಯ ಮೂಲಕ ಬಂದ ಮಾಹಿತಿಯ ಪ್ರಕಾರ ಈ ಮೂರೂ ಜಿಲ್ಲೆಗಳಲ್ಲೂ ಸಂಪೂರ್ಣ ಭದ್ರತೆಗೆ ಒತ್ತು ನೀಡಿದ್ದೇವೆ ಎಂದು ಉಡುಪಿಯಲ್ಲಿ ಹೇಳಿಕೆ ನೀಡಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)
ಲೋಕಸಭೆ ಚುನಾವಣೆ2009 ತಾಜಾ ಸುದ್ದಿಗಳು