ಖರ್ಗೆ ಖುರ್ಚಿ : ಸಿದ್ದು, ಎಚ್ಡಿಕೆ ಜಟಾಪಟಿ
ಕೊಪ್ಪಳ ಲೋಕಸಭೆ ಜೆಡಿಎಸ್ ಅಭ್ಯರ್ಥಿ ಇಕ್ಬಾಲ್ ಅನ್ಸಾರಿ ಪರ ರೋಡ್ ಶೋ ಪ್ರಚಾರ ಕಾರ್ಯ ಕೈಗೊಳ್ಳುವ ಮುನ್ನ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ವಿರೋಧ ಪಕ್ಷದ ನಾಯಕನ ಸ್ಥಾನ ಕೊಡದಿದ್ದರೆ, ವಿದೇಶಿ ಪ್ರವಾಸ ಕೈಗೊಳ್ಳುವೆ ಎಂದು ಹೆದರಿಸಿ ಹಾಗೂ ಬ್ಲಾಕ್ ಮೇಲ್ ಮಾಡಿ ವಿರೋಧ ಪಕ್ಷದ ಸ್ಥಾನ ಪಡೆಯುತ್ತಿದ್ದಾರೆ. ಇದರಿಂದ ದಲಿತರಿಗೆ ಘೋರ ಅನ್ಯಾಯವಾಗುತ್ತಿದೆ ಎಂದು ಕುಮಾರಸ್ವಾಮಿ ಕಟುಕಿದರು.
ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ಖುರ್ಚಿ ಕಸಿದುಕೊಂಡು ಆ ಸ್ಥಾನವನ್ನು ತಾವು ಪಡೆಯಲು ಯತ್ನಿಸುತ್ತಿರುವುದು ನಾಚಿಕೆಗೇಡು ಎಂದು ಸಿದ್ದರಾಮಯ್ಯ ಅವರನ್ನು ಕುಮಾರಸ್ವಾಮಿ ತೀವ್ರ ತರಾಟೆಗೆ ತೆಗೆದುಕೊಂಡರು. ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್ ಆಟಕ್ಕೆ ಉಂಟು ಲೆಕ್ಕಕ್ಕೆ ಇಲ್ಲ ಎಂದು ಸಿದ್ದರಾಮಯ್ಯ ಮಾತನಾಡಿದ್ದಾರೆ. ಕಾಂಗ್ರೆಸ್ ವಲಯದಲ್ಲಿ ವಿಚಾರಿಸಿದರೆ, ಸಿದ್ದರಾಮಯ್ಯ ಆಟ್ಟಕ್ಕಿದ್ದಾರೋ, ಲೆಕ್ಕಕ್ಕಿದ್ದಾರೋ ಎಂಬುದು ತಿಳಿಯಲಿದೆ. ಜೆಡಿಎಸ್ ಬಗ್ಗೆ ಅವರು ಚಿಂತಿಸುವುದು ಬೇಡ ಎಂದು ಕುಮಾರಸ್ವಾಮಿ ತಿರುಗೇಟು ನೀಡಿದರು.
ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್ ತನ್ನ ಶಕ್ತಿಯನ್ನು ಮತ್ತೊಮ್ಮೆ ಸಾಬೀತುಪಡಿಸಲಿದೆ. ಕನಿಷ್ಠ 12 ರಿಂದ 14 ಕ್ಷೇತ್ರಗಳಲ್ಲಿ ಜೆಡಿಎಸ್ ಜಯಭೇರಿ ಬಾರಿಸಲಿದೆ ಎಂದರು. ಕೇಂದ್ರದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಕುಮಾರಸ್ವಾಮಿ ಮತ್ತು ರೆಡ್ಡಿಗಳನ್ನು ಜೈಲಿಗೆ ಹಾಕುತ್ತೇವೆ ಎಂದು ನೀಡಿರುವ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಕುಮಾರಸ್ವಾಮಿ, ಅದೇ ರೆಡ್ಡಿಗಳ ಜೊತೆ ಬಿಜೆಪಿ ಸೇರಲು ಸಿದ್ದತೆ ನಡೆಸಿದ್ದನ್ನು ಅವರು ಮರೆತಂತೆ ಕಾಣುತ್ತಿದೆ ಎಂದು ಟೀಕಿಸಿದರು.
(ದಟ್ಸ್ ಕನ್ನಡ ವಾರ್ತೆ)
ಜನಾರ್ದನರೆಡ್ಡಿ,
ಎಚ್ಡಿಕೆ
ಜೈಲಿಗೆ
ಸಿದ್ದರಾಮಯ್ಯ
ಲೋಕಸಭೆ
ಚುನಾವಣೆ2009
ತಾಜಾ
ಸುದ್ದಿಗಳು