ತಮಿಳುನಾಡಿನಲ್ಲಿ ಕನ್ನಡ ಪರ ಒಕ್ಕೂಟ ಅಖಾಡಕ್ಕೆ
ಬೆಂಗಳೂರು, ಏ. 6 : ಕರ್ನಾಟಕದಲ್ಲಿ ಮಾತ್ರ ದೇಶದ ಎಲ್ಲ ಪ್ರಾದೇಶಿಕ ಪಕ್ಷಗಳು ಕಣಕ್ಕಿಳಿಯುತ್ತವೆ. ತಮಿಳುನಾಡು, ಆಂಧ್ರಪ್ರದೇಶ ಹಾಗೂ ಮಹಾರಾಷ್ಟ್ರದ ಪ್ರಾದೇಶಿಕ ಪಕ್ಷಗಳು ಇಲ್ಲಿ ಸ್ಪರ್ಧಿಸಿ ಇಲ್ಲಿ ನೆಲೆಸಿರುವ ತಮಿಳರು, ಮರಾಠಿಗರ ಹಾಗೂ ತೆಲುಗು ಭಾಷಿಕರಲ್ಲಿ ಜಾಗೃತಿ ಮೂಡಿಸುತ್ತಿರುವುದು ಹಳೆಯ ಸುದ್ದಿ. ಇದೀಗ ಕನ್ನಡ ಪರ ಒಕ್ಕೂಟಗಳು ತಮಿಳುನಾಡಿನಲ್ಲಿ ಲೋಕಸಭೆ ಚುನಾವಣೆಯಲ್ಲಿ ಕಣಕ್ಕಿಳಿದು, ಅಲ್ಲಿರುವ ಕನ್ನಡಿಗರ ಜಾಗೃತಿ ಮೂಡಿಸಲು ಸಜ್ಜಾಗಿವೆ.
ತಮಿಳುನಾಡಿನ ಕನ್ನಡಿಗರನ್ನು ಜಾಗೃತಿಗೊಳಿಸಲು ಕನ್ನಡ ಸಂಘಟನೆಗಳ ಒಕ್ಕೂಟ ಮುಂದಾಗಿದೆ. ಕನ್ನಡಿಗರು ಗಣನೀಯ ಪ್ರಮಾಣದಲ್ಲಿ ನೆಲೆಸಿರುವ ಈರೋಡ್, ತಿರುಪೂರ್ ಹಾಗೂ ನೀಲಗಿರಿ (ಮೀಸಲು) ಲೋಕಸಭೆ ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಚಿಂತನೆ ನಡೆಸಿವೆ. ತಮಿಳುನಾಡಿನಲ್ಲಿ ಅತಂತ್ರ ಸ್ಥಿತಿಯಲ್ಲಿರುವ ಕನ್ನಗರಿಗೆ ಸೂಕ್ತ ನ್ಯಾಯ ದೊರೆಕಿಸಿಕೊಡುವುದು ಇವರ ಉದ್ದೇಶವಾಗಿದೆ.
ಕರ್ನಾಟಕದಲ್ಲಿ ಎಂಇಎಸ್, ಡಿಎಂಕೆ, ಎಐಎಡಿಎಂಕೆ ಪಕ್ಷಗಳು ಸ್ಪರ್ಧಿಸುತ್ತಿವೆ. ತಮ್ಮ ಭಾಷಿಕರ ಪರವಾಗಿ ಹೋರಾಡಿವೆ. ಪರಿಸ್ಥಿತಿ ಹೀಗಿರುವಾಗ ನಾವೇಕೆ ತಮಿಳುನಾಡಿನಲ್ಲಿ ಸ್ಪರ್ಧಿಸಿ ಕನ್ನಡಿಗರ ಪರ ಹೋರಾಡಬಾರದು ಎಂದು ಪ್ರಶ್ನಿಸುತ್ತಾರೆ ಕನ್ನಡ ಪರ ಒಕ್ಕೂಟದ ಅಧ್ಯಕ್ಷ ಶಾ ಮುರಳಿ ಅವರು.
(ಏಜನ್ಸೀಸ್)
ಲೋಕಸಭೆ ಚುನಾವಣೆ2009 ತಾಜಾ ಸುದ್ದಿಗಳು