ಬೆಂಗಳೂರಿನಲ್ಲಿ ಬಿಜೆಪಿ ಕಾರ್ಯಕರ್ತನ ಬರ್ಬರ ಕೊಲೆ
ಬೆಂಗಳೂರು, ಏ. 5 : ವಾಯುವಿಹಾರಕ್ಕೆ ತೆರಳಿದ್ದ ಫೈನಾನ್ಸಿಯರ್ ಹಾಗೂ ಬಿಜೆಪಿ ಕಾರ್ಯಕರ್ತನನ್ನು ದುಷ್ಕರ್ಮಿಗಳು ಮಚ್ಚು ಲಾಂಗ್ ಗಳಿಂದ ಕೊಚ್ಚಿ ಕೊಲೆ ಮಾಡಿರುವ ದಾರುಣ ಘಟನೆ ನಗರದ ಲಾಲ್ ಬಾಗ್ ಉದ್ಯಾನವನದಲ್ಲಿ ಶನಿವಾರ ಬೆಳಗ್ಗೆ ನಡೆದಿದೆ. ಇಟ್ಟಮಡುವಿನ ಎಜಿಎಸ್ ಲೇಔಟ್ ನ ನಿವಾಸಿ ಚಂದ್ರಶೇಖರ್ ಕೊಲೆಗೀಡಾದವರು.
ರೌಡಿ ಪರಂಧಾಮ ಮತ್ತು ಸೈಕಲ್ ರವಿ ಗುಂಪಿನವರು ಈ ಕೊಲೆ ಮಾಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ತಾಯಿ ರುಕ್ಮಿಣಿ ಮತ್ತು ಅತ್ತಿಗೆ ಜಯಂತಿ ಅವರ ಜೊತೆಗೆ ಚಂದ್ರಶೇಖರ್ ಬೆಳಗ್ಗೆ ವಾಯುವಿಹಾರಕ್ಕೆ ಬಂದಿದ್ದರು. ಅಮ್ಮ ಮತ್ತು ಅತ್ತಿಗೆ ಒಂದು ಕಡೆ ವಾಯುವಿಹಾರ ಮಾಡುತ್ತಿದ್ದರೆ, ಇನ್ನೊಂದು ಕಡೆ ಚಂದ್ರಶೇಖರ್ ವಾಕಿಂಗ್ ಮಾಡುತ್ತಿದ್ದರು. ಲಾಲ್ ಬಾಗ್ ಒಳಗಿರುವ ದೊಡ್ಡ ಬಂಡೆಯ ಸಮೀಪ ಚಂದ್ರಶೇಖರ್ ಬಂದೊಡನೆ ಕಾರಿನಲ್ಲಿ ಬಂದ ನಾಲ್ವರು ದುಷ್ಕರ್ಮಿಗಳು ಅವರ ಮೇಲೆ ಏಕಾಏಕಿ ಹಲ್ಲೆ ನಡೆಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಚಂದ್ರಶೇಖರ್ ಬಡ್ಡಿ ವ್ಯವಹಾರ ಮತ್ತು ರಿಯಲ್ ಎಸ್ಟೇಟ್ ದಂಧೆಯಲ್ಲಿ ತೊಡಗಿಸಿಕೊಂಡಿದ್ದರು. ಇತ್ತೀಚೆಗೆ ಅವರು ಬಿಜೆಪಿ ಪಕ್ಷದ ಕಾರ್ಯಕರ್ತರಾಗಿ ಕೆಲಸ ಮಾಡುತ್ತಿದ್ದರು. ಹಳೆಯ ದ್ವೇಷವೇ ಕೊಲೆಗೆ ಕಾರಣ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
(ದಟ್ಸ್ ಕನ್ನಡ ವಾರ್ತೆ)