'ಜಾನಪದ ಕೋಗಿಲೆ' ಸಿರಿಯಜ್ಜಿ ನಿಧನ, ಗಣ್ಯರ ಶೋಕ
ಬೆಂಗಳೂರು, ಏ. 3 : ಜಾನಪದ ಸಿರಿ ಖ್ಯಾತಿಯ, ನಾಡೋಜ ಪ್ರಶಸ್ತಿ ಪುರಸ್ಕೃತ ಸಿರಿಯಜ್ಜಿ (97) ಚಳ್ಳಕೆರೆ ತಾಲೂಕು ಯಾದಲಗಟ್ಟೆ ಗೊಲ್ಲರಹಟ್ಟಿಯಲ್ಲಿ ತೀವ್ರ ಅನಾರೋಗ್ಯದಿಂದ ಗುರುವಾರ ನಿಧನರಾದರು. ಸಿರಿಯಜ್ಜಿ ಅಂತ್ಯಸಂಸ್ಕಾರ ತೋಟದ ಮನೆ ಯಲ್ಲಿ ಶುಕ್ರವಾರ ಬೆಳಗ್ಗೆ ನಡೆಯಲಿದೆ. ಸಾವಿರಕ್ಕೂ ಹೆಚ್ಚು ಜಾನಪದ ಹಾಡುಗಳನ್ನು ಸುಶ್ರಾವ್ಯವಾಗಿ ಹಾಡುತ್ತಿದ್ದ ಸಿರಿಯಜ್ಜಿ ನಿಜಕ್ಕೂ ಜಾನಪದ ಲೋಕದ ಸಿರಿಯಾಗಿದ್ದರು.
ಕನ್ನಡ ಜಾನಪದ ಲೋಕದ ಹಿರಿಯ ಗಾಯಕಿಯಾದ ಸಿರಿಯಜ್ಜಿ ಅವರ ನಿಧನ ಸುದ್ದಿ ತಿಳಿದು ತೀವ್ರ ದು:ಖವಾಯಿತು ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಲ್ಲೂರು ಪ್ರಸಾದ್ ಆರ್. ಕೆ. ಅವರು ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.
'ಜಾನಪದ ಕೋಗಿಲೆ' ಎಂದೇ ಖ್ಯಾತರಾಗಿರುವ ಸಿರಿಯಜ್ಜಿ ಅವರು ತಮ್ಮ ಮಧುರ ಕಂಠದಿಂದ ಸಹಸ್ರಾರು ಜಾನಪದ ಹಾಡುಗಳನ್ನು ಹಾಡಿ ಜನರನ್ನು ರಂಜಿಸುತ್ತಿದ್ದರು. ಇವರ ಕಂಠ ಮಾಧುರ್ಯಕ್ಕಾಗಿ ಕನ್ನಡ ಸಾಹಿತ್ಯ ಪರಿಷತ್ತು ಚಿತ್ರದುರ್ಗದಲ್ಲಿ ನಡೆದ 75ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸನ್ಮಾನಿಸಿತ್ತು.
ಸಿರಿಯಜ್ಜಿ ಅವರ ನಿಧನದಿಂದ ಜಾನಪದ ಲೋಕಕ್ಕೆ ತುಂಬಲಾರದ ನಷ್ಟವುಂಟಾಗಿದೆ. ಅವರ ಕಟುಂಬ ವರ್ಗಕ್ಕೂ ಅವರ ಅಭಿಮಾನಿ ವರ್ಗಕ್ಕೂ ಅವರ ನಿಧನದಿಂದ ಉಂಟಾದ ದು:ಖವನ್ನು ಭರಿಸುವ ಶಕ್ತಿಯನ್ನು ಭಗವಂತನ್ನು ನೀಡಲೆಂದು ಆಶಿಸುತ್ತೇನೆಂದು ತಿಳಿಸಿದರು.
(ದಟ್ಸ್ ಕನ್ನಡ ವಾರ್ತೆ)