ಬಿಜೆಪಿಯಿಂದ ನೀತಿ ಸಂಹಿತೆ ಉಲ್ಲಂಘನೆ : ಎಚ್ಡಿಕೆ ಆರೋಪ
ಲೋಕಸಭೆ ಚುನಾವಣೆಗೆ ಹಣ ಸಂಗ್ರಹಿಸಲೆಂದು ಜಮೀನು ನೀಡಲಾಗುತ್ತಿದೆ ಎಂದಿರುವ ಕುಮಾರಸ್ವಾಮಿ, ಬಿಜೆಪಿ ಸರ್ಕಾರ ನೀತಿ ಸಂಹಿತೆ ಉಲ್ಲಂಘಿಸಿದೆ ಎಂದು ಆರೋಪಿಸಿದರು. ನರಸಿಂಹ ಮೂರ್ತಿ ಎಂಬ ಸಾಫ್ಟ್ ವೇರ್ ತಂತ್ರಜ್ಞ ರೂಪಿಸಿರುವ ಅಂತರ್ಜಾಲ ತಾಣ ಉದ್ಘಾಟಿಸಿದ ನಂತರ ಕುಮಾರಸ್ವಾಮಿ ಮಾತನಾಡುತ್ತಿದ್ದರು.
ಸರ್ಕಾರದ ಹಣ ಲೂಟಿ : ಕರ್ನಾಟಕ ಗೃಹ ಅಭಿವೃದ್ಧಿ ಪ್ರಾಧಿಕಾರಕ್ಕಾಗಿ ಮನೆಗಳನ್ನು ನಿರ್ಮಿಸಲು ಚಿಕ್ಕಬಳ್ಳಾಪುರ ಮತ್ತು ಬೆಂಗಳೂರಿನ ಹೊರವಲಯದಲ್ಲಿ ಗೃಹ ಸಚಿವ ಕೃಷ್ಣಯ್ಯ ಶೆಟ್ಟಿ ಅಧಿಕ ಬೆಲೆ ನೀಡಿ ರೈತರ ಜಮೀನನ್ನು ವಶಪಡಿಸಿಕೊಂಡು ಸರ್ಕಾರದ ಹಣವನ್ನು ದುರುಪಯೋಗ ಮಾಡಿಕೊಂಡಿದ್ದಾರೆ ಎಂದೂ ಕುಮಾರಸ್ವಾಮಿ ಆರೋಪಿಸಿದರು. 4 ಲಕ್ಷ ರು. ಬೆಲೆಯ ಜಮೀನಿಗೆ 53 ಲಕ್ಷ ರು. ನೀಡಿಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇವೆರಡೂ ಘಟನೆಗೆ ಸಂಬಂಧಿಸಿದಂತೆ ಜೆಡಿಎಸ್ ರಾಷ್ಟ್ರೀಯ ಕಾರ್ಯದರ್ಶಿ ವೈವಿಎಸ್ ದತ್ತ ಚುನಾವಣಾ ಆಯೋಗಕ್ಕೆ ಲಿಖಿತ ಆರೋಪ ಸಲ್ಲಿಸಲಿದ್ದಾರೆ ಎಂದು ಅವರು ತಿಳಿಸಿದರು.
ಜೆಡಿಎಸ್ ಪಕ್ಷದ ವೆಬ್ ಸೈಟನ್ನು ಏಪ್ರಿಲ್ 2ರಂದು ಮೈಸೂರಿನಲ್ಲಿ ಪ್ರಾರಂಭಿಸಲಾಗುತ್ತಿದೆ. ಅದರಲ್ಲಿ ಲೋಕಸಭೆ ಚುನಾವಣೆಗೆ ಸ್ಪರ್ಧಿಸುತ್ತಿರುವ ಅಭ್ಯರ್ಥಿಗಳ ವಿವರ ಮತ್ತು ಪ್ರಣಾಳಿಕೆಯ ವಿವರ ನೀಡಲಾಗುವುದು ಮತ್ತು ಸದ್ಯದಲ್ಲಿಯೇ ಪ್ರಚಾರ ಕಾರ್ಯವನ್ನೂ ಆರಂಭಿಸಲಾಗುವುದು ಎಂದು ಕುಮಾರಸ್ವಾಮಿ ವಿವರಿಸಿದರು.
(ಏಜೆನ್ಸೀಸ್)