ಡೆಕ್ಕನ್ ಏವಿಯೇಷನ್ ಕ್ಯಾಪ್ಟನ್ ಗೋಪಿನಾಥ್ ಕಣಕ್ಕೆ
ಬೆಂಗಳೂರು, ಮಾ. 25 : ವೈಮಾನಿಕ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆ ಮಾಡಿರುವ ಡೆಕ್ಕನ್ ಏವಿಯೇಷನ್ ಮುಖ್ಯಸ್ಥ ಕ್ಯಾಪ್ಟನ್ ಗೋಪಿನಾಥ ಅವರು ಪಕ್ಷೇತರ ಅಭ್ಯರ್ಥಿಯಾಗಿ ಲೋಕಸಭೆ ಚುನಾವಣೆಗೆ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ. ಬೆಂಗಳೂರು ಲೋಕಸಭೆ ಕ್ಷೇತ್ರದಿಂದ ಸ್ಪರ್ಧೆ ಬಯಸಿರುವ ಅವರು, ಇನ್ನೆರಡು ದಿನ ದಿನಗಳಲ್ಲಿ ಯಾವ ಕ್ಷೇತ್ರದಿಂದ ಸ್ಪರ್ಧಿಸಬೇಕು ಎನ್ನುವುದನ್ನು ತಿಳಿಸುವುದಾಗಿ ಹೇಳಿದರು.
ವಾರ್ತಾವಾಹಿನಿಯೊಂದಕ್ಕೆ ಸಂದರ್ಶನ ನೀಡಿದ ಅವರು, ಆಪ್ತರು ಹಾಗೂ ಸ್ನೇಹಿತರು ಸಲಹೆ ಮೇರೆಗೆ ಅಖಾಡಕ್ಕೆ ಇಳಿಯುವ ನಿರ್ಧಾರ ಕೈಗೊಳ್ಳಲಾಗಿದೆ ಎಂದರು. ಯಾವ ಪಕ್ಷದೊಂದಿಗೂ ಗುರುತಿಸಿಕೊಳ್ಳಲು ಇಷ್ಟಪಡದ ಅವರು, ರಾಷ್ಟ್ರೀಯ ಪಕ್ಷಗಳು ಸೇರಿದಂತೆ ಪಕ್ಷಗಳು ಜನರ ವಿಶ್ವಾಸವನ್ನು ಕಳೆದುಕೊಂಡಿವೆ ಎಂದು ವಿಷಾದದಿಂದ ಹೇಳಿದರು.
ರಾಜಕಾರಣದಲ್ಲಿ ಜಾತಿ ವ್ಯವಸ್ಥೆ ತೀವ್ರಗೊಂಡಿರುವ ಹಿನ್ನೆಲೆಯಲ್ಲಿ ಇಂದು ದೇಶದ ಸಮಸ್ತ ಪ್ರಗತಿ ಕುಂಠಿತಗೊಂಡಿದೆ. ಜಾತಿ ರಾಜಕಾರಣದಲ್ಲಿ ಮುಳುಗಿರುವ ದೇಶದ ಮುಖಂಡರು ದೇಶದ ಏಳಗೆಯನ್ನು ಮರೆತುಬಿಟ್ಟಿದ್ದಾರೆ ಎಂದು ಗೋಪಿನಾಥ ಬೇಸರದಿಂದ ಹೇಳಿದರು. ಕಳೆದ ಕೆಲ ದಿನಗಳಿಂದ ಲೋಕಸಭೆ ಚುನಾವಣೆಗೆ ಸ್ಪರ್ಧಿಸುವಂತೆ ಆಪ್ತವಲಯ ಹಾಗೂ ಸಮಾನ ಮನಸ್ಕ ಸ್ನೇಹಿತರಿಂದ ಭಾರಿ ಒತ್ತಡ ಬರುತ್ತಿದೆ.
ಈ ಹಿನ್ನೆಲೆಯಲ್ಲಿ ಸ್ಪರ್ಧಿಸಲು ತೀರ್ಮಾನ ಕೈಗೊಳ್ಳಲಾಗಿದೆ. ಮುಂದಿನ ಎರಡು-ಮೂರು ದಿನಗಳಲ್ಲಿ ಬೆಂಗಳೂರಿನಿಂದ ಯಾವ ಕ್ಷೇತ್ರದಲ್ಲಿ ಸ್ಪರ್ಧಿಸಬೇಕು ಎನ್ನುವುದನ್ನು ಸ್ಪಷ್ಟಪಡಿಸುವೆ. ದೇಶವನ್ನು ಮುನ್ನೆಡಸಲು ಪ್ರಜ್ಞಾವಂತ ಯುವಕರ ಅವಶ್ಯಕತೆ ಇದೆ ಎಂದು ಕ್ಯಾಪ್ಟನ್ ವಿವರಿಸಿದರು.
(ದಟ್ಸ್ ಕನ್ನಡ ವಾರ್ತೆ)