ಆಡ್ವಾಣಿ ರ್ಯಾಲಿಗೆ ತಡೆಯೊಡ್ಡಿದ ಮಾಯಾ
ಅಜಮ್ ಗಡ್, ಮಾ. 25 : ಬಿಜೆಪಿಯ ಪ್ರಧಾನಮಂತ್ರಿ ಅಭ್ಯರ್ಥಿ ಎಲ್ ಕೆ ಆಡ್ವಾಣಿಯವರ ಚುನಾವಣಾ ಸಭೆಗೆ ಉತ್ತರಪ್ರದೇಶ ಸರ್ಕಾರ ತಡೆಯೊಡ್ಡಿದೆ. ಭದ್ರತೆಯ ಕಾರಣಕ್ಕಾಗಿ ಇಲ್ಲಿ ಅನುಮತಿ ನೀಡಲಾಗುವುದಿಲ್ಲ ಎಂದು ಅಜಮ್ ಗಡ್ ಜಿಲ್ಲಾ ಮ್ಯಾಜಿಸ್ಟ್ರೇಟರ್ ತಿಳಿಸಿದ್ದಾರೆ. ಮಾರ್ಚ್ 28ರಂದು ನಗರದಲ್ಲಿ ಮತ್ತು ಇತರ ಎರಡು ಕ್ಷೇತ್ರಗಲ್ಲಿ ಸಾರ್ವಜನಿಕ ಸಭೆಯನ್ನು ಚುನಾವಣೆ ಪ್ರಚಾರ ಕಾರ್ಯಕ್ರಮವಿತ್ತು.
ಬಿಜೆಪಿ ಸಭೆಗಳಿಗೆ ಜನರ ಉತ್ತಮ ಪ್ರತಿಕ್ರಿಯೆ ದೊರೆಯುತ್ತಿದೆ, ಇದರಿಂದ ಭಯಭೀತರಾಗಿರುವ ಮಾಯಾವತಿ ಇಂತಹ ಕ್ರಮಕ್ಕೆ ಮುಂದಾಗಿದ್ದಾರೆ. ಇದು ರಾಜಕೀಯ ಪ್ರೇರಿತ ಎಂದು ಬಿಜೆಪಿ ವಕ್ತಾರ ಬಲ್ಬೀರ್ ಪುಂಜ್ ಟೀಕಿಸಿದ್ದಾರೆ. ಸಭೆಗೆ ಬಿಜೆಪಿ ಎರಡು ಸ್ಥಳಗಳನ್ನು ಆರಿಸಿತ್ತು, ಆದರೆ ಎರಡೂ ಸ್ಥಳಗಳಲ್ಲಿ ಅನುಮತಿ ನಿರಾಕರಿಸಲಾಗಿದೆ. ಆಡ್ವಾಣಿಯವರು ಕುಶಿನಗರ್, ಮಹಾರಾಜ್ ಗಂಜ್ ಮತ್ತು ಅಜಮ್ ಗಡ್ ಕ್ಷೇತ್ರದಲ್ಲಿ ಯೋಗಿ ಅದಿತ್ಯಾನಂದ ಜೊತೆ ಸಭೆ ನಡೆಸಬೇಕಿತ್ತು.
ದೆಹಲಿಯ ಬಾತ್ಲಾ ಶೂಟ್ ಔಟ್ ಪ್ರಕರಣದಲ್ಲಿ ಬಂಧಿತರಾಗಿರುವ ಇಂಡಿಯನ್ ಮುಜಾಹಿದ್ದೀನ್ ಗುಂಪಿನ ಇಬ್ಬರು ಉಗ್ರರು ಈ ನಗರದಿಂದ ಬಂದಿದ್ದವರು. ಈ ಉಗ್ರರ ಬಂಧನದಿಂದ ಉತ್ತೇಜಿತರಾಗಿರುವ ಜಿಲ್ಲಾ ನಾಗರಿಕರು ಆಡ್ವಾಣಿಯವರ ಸಭೆಗೆ ಭಾರಿ ಬೆಂಬಲ ವ್ಯಕ್ತಪಡಿಸಬಹುದು ಎಂದು ಮಾಯಾವತಿ ಲೆಕ್ಕಾಚಾರವಾಗಿದೆ. ಇದೇ ಕಾರಣಕ್ಕೆ ಅಡ್ವಾಣಿ ಸಭೆಗೆ ಅನುಮತಿ ನೀಡಿಲ್ಲ ಎನ್ನಲಾಗಿದೆ.
(ದಟ್ಸ್ ಕನ್ನಡ ವಾರ್ತೆ)