ಕುಪ್ವಾರ ಲಷ್ಕರ್-ಸೇನೆ ಗುಂಡಿನ ಕಾಳಗ ಅಂತ್ಯ
ಶ್ರೀನಗರ, ಮಾ. 25 : ಆರು ದಿನಗಳಿಂದ ಕುಪ್ವಾರ ಗಡಿ ಪ್ರದೇಶದಲ್ಲಿ ಭಾರತದ ಮಿಲಿಟರಿ ಪಡೆ ಜೊತೆ ನಡೆಯುತ್ತಿರುವ ಗುಂಡಿನ ಕಾಳಗ ಅಂತ್ಯಗೊಂಡಿದ್ದು, ಓರ್ವ ಮೇಜರ್ ಸೇರಿದಂತೆ ಸೇನೆಯ ಎಂಟು ಮಂದಿ ಮತ್ತು 17 ಉಗ್ರರು ಹತರಾಗಿದ್ದಾರೆ. ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆ ಲಷ್ಕರ್- ಇ- ತೋಯ್ಬಾ ಇದರ ಹೊಣೆ ವಹಿಸಿಕೊಂಡಿದೆ.
ಕಾಶ್ಮೀರದ ಸ್ಥಳೀಯ ದೈನಿಕಕ್ಕೆ ಪತ್ರ ಬರೆದಿರುವ ಲಷ್ಕರ್ ವಕ್ತಾರ ಅಬ್ದುಲ್ಲಾ ಘಜ್ನವಿ,"ಭಾರತೀಯ ಪಡೆಗಳ ಓಡಾಟದ ಬಗ್ಗೆ ಮಾಹಿತಿ ಇತ್ತು. ಅದಕ್ಕಾಗಿ ನಾವು ಹರ್ಪಾ ಅರಣ್ಯ ಪ್ರದೇಶದಲ್ಲಿ ಅಡಗಿದ್ದೆವು. ಸೇನೆಯ 25 ಮಂದಿಯನ್ನು ನಮ್ಮ ಪಡೆ ಹೊಡೆದಹಾಕಿದೆ. ಈ ಹೋರಾಟ ಇನ್ನೂ ಮುಂದುವರಿಯುತ್ತದೆ. ಕಾಶ್ಮೀರದಲ್ಲಿ ನಮ್ಮ ಸ್ವಾತ೦ತ್ರ ಹೋರಾಟ ಇನ್ನೂ ಮುಗಿದಿಲ್ಲ. ಇನ್ನೂ ಹೆಚ್ಚಿನ ಶಕ್ತಿಯೊಂದಿಗೆ ಹೋರಾಟ ಆರಂಭವಾಗುತ್ತದೆ. ಸುಮಾರು 300 - 400 ಉಗ್ರರು ಗಡಿ ನುಸುಳಿ ಹಿಂದೂಸ್ತಾನ್ ಪ್ರವೇಶಿಸಲಿದ್ದಾರೆ " ಎಂದು ಪತ್ರದಲ್ಲಿ ಬರೆದಿದ್ದಾನೆ ಎಂದು ಬ್ರಿಗೇಡಿಯರ ಗುರುಮೀತ್ ಸಿಂಗ್ ಹೇಳಿದ್ದಾರೆ.
ಉಗ್ರರ ಜೊತೆಗಿನ ಗುಂಡಿನ ಕಾದಾಟದಲ್ಲಿ ಮೇಜರ್ ಮೋಹಿತ್ ಶರ್ಮ ಸೇರಿದಂತೆ ಸೇನಾಪಡೆಯ ಎಂಟು ಮಂದಿ ಹತರಾಗಿದ್ದಾರೆ. ಉಗ್ರರ ಬಳಿ ಇದ್ದ ಸ್ಪೋಟಕ ಮತ್ತು ಎಕೆ 47 ಪಿಸ್ತೂಲ್ ಗಳನ್ನು ವಶಪಡಿಸಿಕೊಳ್ಳಲಾಗಿದೆ.(ದಟ್ಸ್ ಕನ್ನಡ ವಾರ್ತೆ)