ಜಾತಿ ಮೋಹ ಬಿಡಿ ಲಿಂಗಾಯಿತರೆ, ಕುಮಾರಸ್ವಾಮಿ
ಮೈಸೂರು, ಮಾ. 22 : ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾದ ಮರುಕ್ಷಣವೇ ಎಲ್ಲಾ ಸಮಸ್ಯೆ ಬಗೆಹರಿಯುತ್ತವೆ ಎಂದು ಭಾವಿಸಿದ್ದ ಲಿಂಗಾಯಿತು ಜಾತಿ ಮೋಹ ಬಿಟ್ಟು ಒಳ್ಳೆಯ ಅಡಳಿತಗಾರನಿಗೆ ಮತ ಹಾಕಬೇಕು ಎಂದು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಕರೆ ನೀಡಿದ್ದಾರೆ.
ನಗರದ ಜಯಮ್ಮ ಗೋವಿಂದೇಗೌಡ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಿದ್ದ ಮೈಸೂರು, ಜಾಮರಾಜನಗರ ಲೋಕಸಭೆ ಕ್ಷೇತ್ರದ ಜೆಡಿಎಸ್ ಕಾರ್ಯಕರ್ತರು, ಮತದಾರರ ಸಮಾವೇಶದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಮೈಸೂರು, ಚಾಮರಾಜನಗರ ಲೋಕಸಭಾ ಕ್ಷೇತ್ರಗಳು ತಮಗೆ ಪ್ರತಿಷ್ಠೆಯ ಕಣವಾಗಿವೆ. ಲಿಂಗಾಯಿತರು ಯಡಿಯೂರಪ್ಪ ಮುಖ್ಯಮಂತ್ರಿಯಾದರೆ ಎಲ್ಲಾ ಸಮಸ್ಯೆಗಳು ನಿವಾರಣೆಯಾಗಲಿವೆ ಎಂದು ಭಾವಿಸಿದ್ದರು. ಆದರೆ, ನಂಬಿಕೆ ಹುಸಿಯಾಗಿದೆ. ಆದ್ದರಿಂದ ಜಾತಿ ಮೋಹ ಬಿಟ್ಟು ಉತ್ತಮ ಅಭ್ಯರ್ಥಿಯನ್ನು ಆಯ್ಕೆ ಮಾಡಿ ಎಂದು ಹೇಳಿದರು.
ನಂತರ ಅವರಪ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಅವರನ್ನು ತರಾಟೆಗೆ ತೆಗೆದುಕೊಂಡು, ಮಾಜಿ ಉಪಮುಖ್ಯಮಂತ್ರಿ ಸಿದ್ದರಾಮಯ್ಯ ಪುಟಗೋಸಿ ವಿರೋಧ ಪಕ್ಷದ ನಾಯಕ ಸ್ಥಾನ ಪಡೆಯಲು ಕಾಂಗ್ರೆಸ್ ಮುಖಂಡರನ್ನು ಸುಮಾರು 9 ತಿಂಗಳು ಬ್ಲಾಕ್ ಮೇಲ್ ಮಾಡಿದ್ದಾರೆ ಎಂದರು. ದಲಿತ ನಾಯಕ ಮಲ್ಲಿಕಾರ್ಜುನ ಖರ್ಗೆಗೆ ನೀಡಲಾಗಿರುವ ವಿರೋಧ ಪಕ್ಷ ಸ್ಥಾನವನ್ನು ಕಸಿದುಕೊಳ್ಳಲು ಅವರಾಡುತ್ತಿರುವ ನಾಟಕ ಎಲ್ಲರಿಗೂ ಗೊತ್ತಿರುವ ಸಂಗತಿ ಎಂದು ಹರಿಹಾಯ್ದರು.
ಕಳೆದ ಕೆಲ ದಿನಗಳಿಂದ ಹಿಂದೆ ಮಾಜಿ ಪ್ರಧಾನಿ ದೇವೇಗೌಡ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದ ಸಿದ್ದರಾಮಯ್ಯ ಇನ್ನೊಂದು ಬಾರಿ ಪ್ರಧಾನಮಂತ್ರಿಯಾಗಲು ತೃತೀ ರಂಗ ಹುಟ್ಟುಹಾಕಿದ್ದಾರೆ ಎಂದು ಲೇವಡಿ ಮಾಡಿದ್ದರು.
(ದಟ್ಸ್ ಕನ್ನಡ ವಾರ್ತೆ)