ಚುನಾವಣಾ ಅಂಕಿ ಅಂಶ ಸಂಗ್ರಹಕ್ಕೆ ಐಟಿ ನೆರವು
ಬೆಂಗಳೂರು, ಮಾ.21: ಚುನಾವಣಾ ಸಂದರ್ಭದಲ್ಲಿ ಮಾಹಿತಿ ಸಂಗ್ರಹ, ಹಾಗೂ ವರ್ಗೀಕರಣ ಅತ್ಯಂತ ಶ್ರಮ ಹಾಗೂ ಸಮಯ ಬೇಡುವ ಕೆಲಸ. ಜಿಲ್ಲಾ ಚುನಾವಣಾಧಿಕಾರಿಗಳ ಕಛೇರಿಗಳಲ್ಲಿ ಮಾಹಿತಿ ಸಂಗ್ರಹಿಸಿ, ರಾಜ್ಯ ಮುಖ್ಯ ಚುನಾವಣಾಧಿಕಾರಿಯವರ ಕಛೇರಿಗೆ ನಿಗದಿತ ನಮೂನೆಯಲ್ಲಿ ತಪ್ಪಿಲ್ಲದೆ, ಸಕಾಲಕ್ಕೆ ಕಳುಹಿಸುವುದು ಅತಿ ದೊಡ್ಡ ಸವಾಲು.
ಮಾಹಿತಿ ತಂತ್ರಜ್ಞಾನದ ನೆರವಿನಿಂದ ರಾಜ್ಯದಲ್ಲಿ ವೆಬ್ ಆಧಾರಿತ ಮಾಹಿತಿ ಸಂಗ್ರಹ (ವೆಬ್ ರಿಪೋರ್ಟಿಂಗ್ ಸಿಸ್ಟಮ್) ವ್ಯವಸ್ಥೆಯನ್ನು ಅಳವಡಿಸಲಾಗಿದ್ದು, ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದೆ. ಈಗ ಬೆರಳ ತುದಿಯಲ್ಲಿ ಇಡೀ ರಾಜ್ಯದ ಜಿಲ್ಲಾವಾರು, ಲೋಕಸಭೆ ಕ್ಷೇತ್ರವಾರು ನಿಖರ ಮಾಹಿತಿ ಸಕಾಲಕ್ಕೆ ಲಭ್ಯ. ಈ ವ್ಯವಸ್ಥೆಯ ಕುರಿತು ಭಾರತ ಚುನಾವಣಾ ಆಯೋಗವೂ ಮೆಚ್ಚುಗೆ ವ್ಯಕ್ತಪಡಿಸಿದ್ದು, ಎಲ್ಲಾ ರಾಜ್ಯಗಳ ಮುಖ್ಯ ಚುನಾವಣಾಧಿಕಾರಿಗಳ ಕಛೇರಿಗೂ ಈ ವ್ಯವಸ್ಥೆ ಕಲ್ಪಿಸುವಂತೆ ಸೂಚಿಸಿದೆ. ಈ ವ್ಯವಸ್ಥೆಯು ನಾಳೆಯಿಂದ ಎಲ್ಲಾ ರಾಜ್ಯಗಳಲ್ಲಿ ಜಾರಿಗೆ ಬರಲಿದೆ.
ವೆಬ್ ರಿಪೋರ್ಟಿಂಗ್ ಸಿಸ್ಟಮ್: ಜಿಲ್ಲೆಯ ಅಂಕಿ ಅಂಶಗಳು, ದಾಖಲಾದ ಪ್ರಕರಣಗಳ ಕುರಿತು ರಾಜ್ಯ ಮುಖ್ಯ ಚುನಾವಣಾಧಿಕಾರಿಯವರಿಗೆ ಆನ್ಲೈನ್ನಲ್ಲಿ ಮಾಹಿತಿ ನೀಡುವ ಈ ವ್ಯವಸ್ಥೆಯು, ಸಂಗ್ರಹವಾದ ಮಾಹಿತಿಯನ್ನು ತಾನೇ ವರ್ಗೀಕರಿಸುತ್ತದೆ. ಇದರಲ್ಲಿ ಜಿಲ್ಲಾವಾರು ಹಾಗೂ ಕ್ಷೇತ್ರವಾರು ಮಾಹಿತಿ ಪಡೆಯಲು ಸಾಧ್ಯ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಎಂ.ಎನ್. ವಿದ್ಯಾಶಂಕರ್ ಅವರು ತಿಳಿಸಿದರು.
ಈ ವ್ಯವಸ್ಥೆಯಲ್ಲಿ ಮತದಾರರ ಪಟ್ಟಿಗೆ ಸಂಬಂಧಿಸಿದ ವಿಷಯಗಳು ಹಾಗೂ ಚುನಾವಣಾ ಸಂಬಂಧಿ ವಿಷಯಗಳ ಕುರಿತು ಮಾಹಿತಿ ಸಂಗ್ರಹಿಸಲು ಅವಕಾಶ ಕಲ್ಪಿಸಲಾಗಿದೆ. ನೀತಿ ಸಂಹಿತೆ ಉಲ್ಲಂಘನೆ, ಚುನಾವಣಾ ಅಕ್ರಮಗಳ ಕುರಿತು ಆಯಾ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿಗಳಿಂದ ಮಾಹಿತಿ ಪಡೆಯಲಾಗುತ್ತದೆ. ಅಂತೆಯೇ ಮತದಾರರ ಪಟ್ಟಿಗೆ ಮತದಾರರ ಸೇರ್ಪಡೆ, ತಿದ್ದುಪಡಿ ಮತ್ತಿತರ ವಿಷಯಗಳ ಅರ್ಜಿ ವಿಲೇವಾರಿ, ದೂರು ಪರಿಹಾರ ಮುಂತಾದ ವಿಷಯಗಳ ಕುರಿತು ಜಿಲ್ಲಾಧಿಕಾರಿಗಳಿಂದ ಮಾಹಿತಿ ಪಡೆಯಲಾಗುತ್ತದೆ.
ಮಾಹಿತಿ ನೀಡಲು ವಿಳಂಬವಾದರೆ ತಾನಾಗಿ ಎಸ್ಎಂಎಸ್, ಇ-ಮೇಲ್ ಹಾಗೂ ಇ-ಫ್ಯಾಕ್ಸ್ ಮುಖಾಂತರ ಸಂಬಂಧಿಸಿದ ಅಧಿಕಾರಿಗಳನ್ನು ಎಚ್ಚರಿಸುವ ವ್ಯವಸ್ಥೆಯಿದೆ.ರಾಜ್ಯ ಮುಖ್ಯ ಚುನಾವಣಾಧಿಕಾರಿಗಳು ಎಲ್ಲಾ ಜಿಲ್ಲಾ ಚುನಾವಣಾಧಿಕಾರಿಗಳಿಗೆ ಏಕಕಾಲಕ್ಕೆ ಸಂದೇಶ ಕಳುಹಿಸುವ ವ್ಯವಸ್ಥೆಯೂ ಇದರಲ್ಲಿದೆ. ಚುನಾವಣಾ ಆಯೋಗದ ಗಮನ ಸೆಳೆಯುವಂತಹ ವಿಷಯಗಳ ಕುರಿತು ಪತ್ರಿಕಾ ತುಣುಕುಗಳು, ಧ್ವನಿ ಮುದ್ರಣ ಹಾಗೂ ವಿಡಿಯೋ ತುಣುಕುಗಳನ್ನೂ ಸಹ ಅಪ್ಲೋಡ್ ಮಾಡಲು ಈ ವೆಬ್ ರುಪೋರ್ಟಿಂಗ್ ವ್ಯವಸ್ಥೆಯಲ್ಲಿ ಅವಕಾಶ ಕಲ್ಪಿಸಲಾಗಿದೆ.
(ದಟ್ಸ್ ಕನ್ನಡ ವಾರ್ತೆ)