ಗೊಟ್ಟಿಗೆರೆ ಕೆರೆ ವಿವಾದ : ಸರ್ಕಾರದ ಅಧಿಸೂಚನೆ ವಜಾ
ಬೆಂಗಳೂರು, ಮಾ. 19 : ವಿವಾದಿತ ಗೊಟ್ಟಿಗೆರೆ ಕೆರೆ ಮಧ್ಯೆ ರಸ್ತೆ ನಿರ್ಮಿಸಲು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ನೇತೃತ್ವದ ಸರ್ಕಾರ ಹೊರಡಿಸಿದ್ದ ಅಧಿಸೂಚನೆಯನ್ನು ರಾಜ್ಯ ಹೈಕೋರ್ಟ್ ಇಂದು ವಜಾಗೊಳಿಸಿ ಆದೇಶ ನೀಡಿದೆ. ಇದರಿಂದ ಮಾಜಿ ಪ್ರಧಾನಮಂತ್ರಿ ಎಚ್ ಡಿ ದೇವೇಗೌಡ ಕುಟುಂಬ ಹಾಗೂ ನೈಸ್ ಸಂಸ್ಥೆಯ ನಡುವಣ ಇರುವ ಕಾನೂನು ತೊಡಕುಗಳಲ್ಲೊಂದಾದ ಗೊಟ್ಟಿಗೆರೆ ಕೆರೆ ವಿವಾದದಲ್ಲಿಯೂ ನೈಸ್ ಸಂಸ್ಥೆಗೆ ಜಯ ದೊರಕುವ ಮೂಲಕ ದೇವೇಗೌಡರ ಕುಟುಂಬಕ್ಕೆ ಮತ್ತೊಮ್ಮೆ ಮುಖಭಂಗವಾಗಿದೆ.
ವಾದ ಪ್ರತಿವಾದವನ್ನು ಆಲಿಸಿದ ಮುಖ್ಯ ನ್ಯಾಯಮೂರ್ತಿ ಪಿಡಿ ದಿನಕರನ್ ಹಾಗೂ ನ್ಯಾಯಮೂರ್ತಿ ವಿಜಿ ಸಬಾಹಿತ್ ಅವರನ್ನು ಒಳಗೊಂಡ ವಿಭಾಗೀಯ ಪೀಠ 2006 ನವೆಂಬರ್ 4ರ ಅಧಿಸೂಚನೆಯನ್ನು ಅನೂರ್ಜಿತಗೊಳಿಸುವ ಮೂಲಕ ಈ ವಿವಾದಕ್ಕೆ ತೆರೆ ಎಳೆದಿದೆ.
ಗೊಟ್ಟಿಗೆರೆ ಕೆರೆಯನ್ನು ಸುತ್ತಿ ಸಂಚರಿಸುವುದಕ್ಕಿಂತ ಕೆರೆ ಮಧ್ಯದಲ್ಲಿ ರಸ್ತೆ ನಿರ್ಮಿಸಲು ಸರ್ಕಾರ ಅಧಿಸೂಚನೆಯನ್ನು ಹೊರಡಿಸಿತ್ತು. ಈ ಅಧಿಸೂಚನೆಯನ್ನು ಪ್ರಶ್ನಿಸಿ ನೈಸ್ ಸಂಸ್ಥೆ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿ, ಕೆರೆ ಮಧ್ಯೆ ರಸ್ತೆ ನಿರ್ಮಿಸುವುದರಿಂದ ಪರಿಸರ ನಾಶವಾಗುತ್ತದೆ ಹಾಗೂ ಕೆರೆಗೆ ಹೊಂದಿಕೊಂಡು ಪೆರಿಫೆರಿಲ್ ರಸ್ತೆ ಇರುವುದರಿಂದ ಕೆರೆಯ ಮಧ್ಯದ ಉದ್ದೇಶಿತ ರಸ್ತೆಯ ಅವಶ್ಯಕತೆ ಇರುವುದಿಲ್ಲ ಎಂದು ವಾದಿಸಿತ್ತು.
ರಾಜ್ಯ ಸರ್ಕಾರ ಕೆಲ ಪಟ್ಟಬದ್ಧ ಹಿತಾಸಕ್ತಿಗಳ ಜಮೀನುಗಳನ್ನು ಉಳಿಸಿಕೊಳ್ಳುವ ದುರುದ್ದೇಶದಿಂದ ಈ ಅಧಿಸೂಚನೆ ಹೊರಡಿಸಿತ್ತೆಂದು ನೈಸ್ ಸಂಸ್ಥೆ ವಾದಿಸಿತ್ತು. 2004 ಫೆಬ್ರವರಿ 2ರಂದು ಆಗಿರುವ ಒಪ್ಪಂದದ ಪ್ರಕಾರ ಪೆರಿಫೆರಲ್ ರಸ್ತೆಯನ್ನೇ ಬಳಕೆಯಾಗುವಂತೆ ಆದೇಶಿಸಲು ನ್ಯಾಯಾಲಯವನ್ನು ಕೋರಿತ್ತು.
(ದಟ್ಸ್ ಕನ್ನಡ ವಾರ್ತೆ)