ಚಿರು, ಎನ್ಟಿಆರ್ ಚಿತ್ರಗಳ ಪ್ರಸಾರ ಬ್ರೇಕ್ ಗೆ ಕೈ ಕಸರತ್ತು
ಹೈದರಾಬಾದ್, ಮಾ. 19 : ಚುನಾವಣೆ ನೀತಿ ಸಂಹಿತೆ ಜಾರಿಯಾಗಿರುವ ಹಿನ್ನೆಲೆಯಲ್ಲಿ ಚಿರಂಜೀವಿ ಸೇರಿದಂತೆ ರಾಜಕೀಯದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿರುವ ಎಲ್ಲ ನಟರ ಚಿತ್ರಗಳನ್ನು ಬೆಳ್ಳಿತೆರೆ ಹಾಗೂ ಕಿರುತೆರೆಯಲ್ಲಿ ಪ್ರಸಾರ ಮಾಡದಂತೆರ್ ಸೂಚನೆ ನೀಡಬೇಕು ಎಂದು ಕಾಂಗ್ರೆಸ್ ಪಕ್ಷ ಆಯೋಗಕ್ಕೆ ಮನವಿ ಮಾಡಿಕೊಂಡಿದೆ.
ಪ್ರಜಾರಾಜ್ಯಂ ಪಕ್ಷ ಮುಖಂಡ ಚಿರಂಜೀವಿ, ಇವರ ಸಹೋದರ ಪವನ್ ಕಲ್ಯಾಣ್ , ನಾಗಬಾಬು, ಅಲ್ಲದೆ, ತೆಲುಗು ದೇಶಂ ಪಕ್ಷದ ಎನ್ ಬಾಲಕೃಷ್ಣ, ಹಾಗೂ ಜ್ಯೂನಿಯರ್ ಎನ್ ಟಿ ಆರ್ ಅವರ ಚಿತ್ರಗಳನ್ನು ಬೆಳ್ಳಿತೆರೆ ಹಾಗೂ ಕಿರುತೆರೆಯಲ್ಲಿ ಪ್ರಸಾರ ಮಾಡುವುದನ್ನು ತಡೆಯಬೇಕು. ಚಿತ್ರಗಳ ಪ್ರಸಾರದಿಂದ ಮತ ಗಳಿಸಲು ಅನುಕೂಲವಾಗಲಿದೆ. ಆದ್ದರಿಂದ ಕೂಡಲೇ ಇದಕ್ಕೆ ತಡೆ ನೀಡುವಂತೆ ಕಾಂಗ್ರೆಸ್ ಪಕ್ಷದ ಮುಖಂಡ ಕೆ ರೋಸಯ್ಯ ಆಯೋಗವನ್ನು ಒತ್ತಾಯಿಸಿದ್ದಾರೆ.
ಕೆಲ ಕಿರುತೆರೆಗಳು ನಟರ ಚಿತ್ರಗಳ ಪ್ರಸಾರಕ್ಕೆ ಹೆಚ್ಚು ಮುತುವರ್ಜಿ ವಹಿಸಿವೆ. ಅಲ್ಲದೇ ಈ ನಟರಿಗೆ ಅಪಾರ ಅಭಿಮಾನಿ ಬಳಗ ಇರುವುದರಿಂದ ಮತದಾರರ ಒಲೈಕೆಗೆ ಮತ್ತಷ್ಟು ಅನುಕೂಲ ಮಾಡಿಕೊಟ್ಟಂತೆ ಆಗುತ್ತದೆ. ಕೂಡಲೇ ಈ ನಟರ ಚಿತ್ರಗಳ ಪ್ರಸಾರವನ್ನು ನಿಷೇಧಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)