ಬಿಜೆಪಿ ವರಿಷ್ಠರ ವಿರುದ್ಧ ಮತ್ತೆ ಬಂಡಾಯವೆದ್ದ ಶಿವಪ್ಪ
ಬೆಂಗಳೂರು, ಮಾ. 18 : ಹಾಸನ ಲೋಕಸಭೆ ಕ್ಷೇತ್ರಕ್ಕೆ ಬಿಜೆಪಿ ಟಿಕೆಟ್ ನ್ನು ಎಚ್ ಕೆ ಹನುಮೇಗೌಡರಿಗೆ ನೀಡಿರುವುದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಬಿಜೆಪಿ ಹಿರಿಯ ಮುಖಂಡ ಬಿಬಿ ಶಿವಪ್ಪ, ವರಿಷ್ಠರ ಕ್ರಮಕ್ಕೆ ಅಸಮಾಧಾನಗೊಂಡಿದ್ದಾರೆ. ಹನುಮೇಗೌಡರಿಗೆ ದೇವೇಗೌಡರ ವಿರುದ್ಧ ಗೆಲ್ಲುವ ಶಕ್ತಿ ಖಂಡಿವಾಗಿಯೂ ಇಲ್ಲ. ಅಸಮರ್ಥ ಅಭ್ಯರ್ಥಿಯನ್ನು ನಿಲ್ಲಿಸಿದ್ದು, ಬಿಜೆಪಿ ಗೆಲುವು ಮರಿಚಿಕೆ ಎಂದು ಅವರು ಭವಿಷ್ಯ ನುಡಿದ್ದಾರೆ.
ಹಾಸನ ಲೋಕಸಭೆ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಶಿವಪ್ಪ ಅವರಿಗೆ ಟಿಕೆಟ್ ಕೈತಪ್ಪಿರುವುದು ಈ ಅಸಮಾಧಾನಕ್ಕೆ ಕಾರಣವಾಗಿದೆ. ತಾವೂ ಟಿಕೆಟ್ ಆಕಾಂಕ್ಷಿ ಎನ್ನುವುದನ್ನು ಸ್ವತಃ ಅವರೆ ಸ್ಪಷ್ಪಪಡಿಸಿದ್ದಾರೆ. ಹನುಮೇಗೌಡರಿಗೆ ಯಾವ ಮಾನದಂಡದ ಮೇಲೆ ಲೋಕಸಭೆ ಟಿಕೆಟ್ ನೀಡಲಾಗಿದೆ ಎಂದು ಪ್ರಶ್ನಿಸಿದ ಅವರು, ಹನುಮೇಗೌಡ ಪಕ್ಷಾಂತರಿ ಮನಸ್ಥಿತಿಯ ವ್ಯಕ್ತಿ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬೇರೆ ಪಕ್ಷದ ಬಾಗಿಲು ತಟ್ಟಿದ್ದಾರೆ. ಹೋಗಿಯೂ ಬಂದಿದ್ದಾರೆ. ಪಕ್ಷದಲ್ಲಿರುವ ನಿಷ್ಠಾವಂತರನ್ನು ಕಡೆಗಣಿಸಿ ಪಕ್ಷಾಂತರಿಗಳಿಗೆ ಮಣೆ ಹಾಕುವುದು ಸರಿಯಲ್ಲಿ ಎಂದು ಹರಿಹಾಯ್ದರು.
ದೇವೇಗೌಡರನ್ನು ಸೋಲಿಸುವ ತಾಕತ್ತಾಗಲಿ, ಸಾಮರ್ಥ್ಯವಾಗಲಿ ಹನಮೇಗೌಡರಿಗಿಲ್ಲ, ಆದ್ದರಿಂದ ಪಕ್ಷದ ವರಿಷ್ಠರು ಈ ಕೂಡಲೇ ಅಭ್ಯರ್ಥಿಯನ್ನು ಬದಲಾಯಿಸಬೇಕು. ನಾನು ಲಿಂಗಾಯಿತ ದೇವೇಗೌಡರ ವಿರುದ್ಧ ಸೂಕ್ತ ಅಭ್ಯರ್ಥಿ ಅಲ್ಲ ಎನ್ನುವುದಾದರೆ, ಅದೇ ಜನಾಂಗದಲ್ಲಿ ಸಮರ್ಥವಾಗಿರುವ ಬೇರೆ ನಾಯಕನಿಗೆ ಟಿಕೆಟ್ ಕೊಟ್ಟರೂ ಸರಿ. ಆದರೆ, ಹನುಮೇಗೌಡ ಸ್ಪರ್ಧೆ ಎಂದು ಖಡಾಖಂಡಿತವಾಗಿ ಬೇಡ ಹೇಳಿದರು. ಹನುಮೇಗೌಡರು ಅಧಿಕೃತ ಅಭ್ಯರ್ಥಿಯಾದರೆ ನಾವು ಬಿಜೆಪಿ ಮತ ನೀಡುತ್ತೇವೆ. ಆದರೆ, ಮತಯಾಚನೆ ಹೋಗುವುದಿಲ್ಲ ಎಂದು ಶಿವಪ್ಪ ಸ್ಪಷ್ಟಪಡಿಸಿದರು.
(ದಟ್ಸ್ ಕನ್ನಡ ವಾರ್ತೆ)