ತಿ ನರಸೀಪುರ : ಮರಳು ಗಣಿಗಾರಿಕೆ ನಿಷೇಧ
ತಿ. ನರಸೀಪುರ ತಾಲ್ಲೂಕಿನ ಕೆಲವು ಜೀವನಾಡಿ ಸಂಪರ್ಕ ಸೇತುವೆ ಆಜೂಬಾಜುಗಳಲ್ಲಿ ಅಕ್ರಮ ಮರಳು ಗಣಿಗಾರಿಕೆ ನಡೆಯುತ್ತಿದ್ದು , ಇದರಿಂದ ಸೇತುವೆಗಳಿಗೆ ಬಾರಿ ಅಪಾಯ ಒದಗುವ ಬಗ್ಗೆ ಸಾರ್ವಜನಿಕರು ಆತಂಕ ವ್ಯಕ್ತಪಡಿಸಿರುವುದರಿಂದ ಸೇತುವೆಗಳ ಸುತ್ತ ಒಂದು ಕಿ.ಮೀ. ವ್ಯಾಪ್ತಿಯಲ್ಲಿ ಮರಳು ಗಣಿಗಾರಿಕೆಯನ್ನು ಮಾಡದಂತೆ ಕೂಡ ನಿಷೇಧ ಹೇರಲಾಗಿದೆ.
ತಿ. ನರಸೀಪುರ ತಾಲ್ಲೂಕಿನಲ್ಲಿರುವ ತಿರುಮಕೂಡಲು ವೃತ್ತದಿಂದ ಪಟ್ಟಣವನ್ನು ಸಂಪರ್ಕಿಸುವ ಕಬಿನಿ ಸೇತುವೆ, ಸೋಸಲೆಯನ್ನು ಸಂಪರ್ಕಿಸುವ ಕಾವೇರಿ ಸೇತುವೆ, ಬನ್ನೂರಿನ ಬಳಿ ಕಾವೇರಿ ಸೇತುವೆ ಹಾಗೂ ತಲಕಾಡನ್ನು ಸಂಪರ್ಕಿಸುವ ಹೆಮ್ಮಿಗೆ ಸೇತುವೆ ಸೇರಿದಂತೆ ಈ ನಾಲ್ಕೂ ಸೇತುವೆಗಳ ಇಕ್ಕೆಲಗಳಲ್ಲಿ ಹಾಗೂ ನದಿಯ ಎರಡೂ ದಂಡೆಗಳಲ್ಲಿ ಒಂದು ಕಿ.ಮೀ. ವ್ಯಾಪ್ತಿಗೆ ಒಳಪಟ್ಟಿರುವ ನದಿ ತೀರ ಪ್ರದೇಶಗಳಲ್ಲಿ ಯಾವುದೇ ರೀತಿಯ ಮರಳು ಗಣಿಗಾರಿಕೆ ಮಾಡುವುದನ್ನು ನಿಷೇಧಿಸಿದೆ. ನಿಷೇಧ ಉಲ್ಲಂಘಿಸಿ ಅಕ್ರಮ ಮರಳು ಗಣಿಗಾರಿಕೆ ಮಾಡುವವರ ವಿರುದ್ಧ ಪೋಲೀಸರು ಕಾನೂನು ಕ್ರಮ ಜರುಗಿಸುವರು ಎಂದು ಆದೇಶದಲ್ಲಿ ತಿಳಿಸಲಾಗಿದೆ.
(ದಟ್ಸ್ ಕನ್ನಡ ವಾರ್ತೆ)