ಪಾಕಿಸ್ತಾನ : ಜರ್ದಾರಿ ವಿರುದ್ಧ ನವಾಜ್ ಕೆಂಡ
ಇಸ್ಲಾಮಾಬಾದ್, ಮಾ. 11 : ರಾಜಕೀಯ ಅಸ್ಥಿರತೆಯಿಂದ ದೇಶದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಕುಸಿದಿದೆ. ಆಡಳಿತರೂಢ ಸರ್ಕಾರ ಕೈಕಟ್ಟಿ ಕುಳಿತಿದೆ. ಪಾಕಿಸ್ತಾನದ ಸೇನಾಪಡೆ ಕ್ಷಿಪ್ರಕ್ರಾಂತಿ ನಡೆಸುವ ಎಲ್ಲ ಸಾಧ್ಯತೆಗಳೂ ಇವೆ. ಈ ಮಧ್ಯೆ ಸರ್ಕಾರ ವೈಫಲ್ಯವನ್ನು ಖಂಡಿಸಿ ಪಾಕಿಸ್ತಾನ ಮುಸ್ಲಿಂ ಲೀಗ್ (ನವಾಜ್) ಪಿಎಂಎಲ್ (ಎನ್) ಪಕ್ಷ ಮುಖಂಡ ಮಾಜಿ ಪ್ರಧಾನಿ ನವಾಜ್ ಷರೀಫ್ ನಗರದಲ್ಲಿ ಬೃಹತ್ ರ್ಯಾಲಿಯನ್ನು ಆಯೋಜಿಸಿದ್ದು, ಅಧ್ಯಕ್ಷ ಜರ್ದಾರಿ ವಿರುದ್ದ ತೀವ್ರ ವಾಗ್ಧಾಳಿ ನಡೆಸಿದ್ದಾರೆ.
ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಅವರು, ಪಾಕಿಸ್ತಾನದಲ್ಲಿ ಈ ವರೆಗೂ ನಡೆದಿರುವ ಎಲ್ಲ ಘಟನೆಗಳಿಗೂ ಅಧ್ಯಕ್ಷ ಆಸೀಫ್ ಅಲೀ ಜರ್ದಾರಿ ಅವರೇ ಕಾರಣ ಎಂದು ದೂರಿದರು. ಆಸೀಫ್ ಅಲಿ ಜರ್ದಾರಿ ಅವರ ಕಪಿಮುಷ್ಠಿಯಿಂದ ದೇಶವನ್ನು ಶೀಘ್ರದಲ್ಲಿ ಬೇರ್ಪಡಿಸದಿದ್ದರೆ, ದೇಶದ ಘನತೆ ಇನ್ನಷ್ಟು ಅಧಃಪತನಕ್ಕೆ ಇಳಿಯಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು, ದೇಶವನ್ನು ನರಕಕ್ಕೆ ಕೊಂಡೊಯ್ಯತ್ತಿರುವುದನ್ನು ಕಂಡು ಸುಮ್ಮನೆ ಮನೆಯಲ್ಲಿ ಕೂರುವುದು ಸಾಧ್ಯವಿಲ್ಲ ಎಂದು ಹೇಳಿದರು.
ತಮ್ಮನ್ನು ಪಾಕ್ ಸರ್ಕಾರ ಗೃಹ ಬಂಧನದಲ್ಲಿರಿಸಿದೆ ಎನ್ನುವುದನ್ನು ಸ್ಪಷ್ಟವಾಗಿ ತಳ್ಳಿಹಾಕಿದ ಅವರು, ಇದು ಸರ್ಕಾರದ ನಾಟಕ ಎಂದು ಲೇವಡಿ ಮಾಡಿದರು. ನನಗೆ ಅಧಿಕಾರ ದಾಹವಿಲ್ಲ. ಪಾಕಿಸ್ತಾನದ ಜನತೆಗೆ ಎಂದೂ ಮೋಸ ಮಾಡಲಾರೆ ಎಂದ ಅವರು, ಪಾಕ್ ನಲ್ಲಿ ರಾಜಕೀಯ ಅಸ್ಥಿರತೆ ಉಂಟು ಮಾಡಿರುವವರಿಗೆ ತಕ್ಕೆ ಪಾಠ ಕಲಿಸುವವರೆಗೂ ಹೋರಾಟ ಕೈಬಿಡುವುದಿಲ್ಲ ಎಂದು ಹೇಳಿದರು.
(ದಟ್ಸ್ ಕನ್ನಡ ವಾರ್ತೆ)