ಬಾನ್ದನಿಯಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಕುರಿತ ಸಂವಾದ
ಬೆಂಗಳೂರು, ಮಾ.7: ರಾಜ್ಯಾದ್ಯಂತ ಮಾರ್ಚ್ 30 ರಿಂದ ಪ್ರಾರಂಭವಾಗುವ ಎಸ್.ಎಸ್.ಎಲ್. ಸಿ. ಪರೀಕ್ಷೆಗೆ ಸಂಬಂಧಿಸಿದಂತೆ ಶಿಕ್ಷಕರು, ಪೋಷಕರು ಹಾಗೂ ವಿದ್ಯಾರ್ಥಿಗಳು ಮಾರ್ಚ್ 12 ರಂದು ರಾತ್ರಿ 9.30 ರಿಂದ 10.30 ಗಂಟೆಯವರೆಗೆ ಆಕಾಶವಾಣಿ ಬಾನ್ದನಿ ಕಾರ್ಯಕ್ರಮದಲ್ಲಿ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯ ನಿರ್ದೇಶಕಡಿ.ಎಸ್. ರಾಜಣ್ಣ ಹಾಗೂ ಕಾರ್ಯದರ್ಶಿ ಅಬ್ದುಲ್ ಅಲಿಂ ಅವರೊಂದಿಗೆ ನೇರವಾಗಿ ಸಂವಾದ ನಡೆಸಬಹುದು.
ಅಲ್ಲದೆ ಎಸ್.ಎಸ್.ಎಲ್.ಸಿ. ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಅಭ್ಯಾಸದ ಕೊನೆಯ ಹಂತದ ಸಿದ್ದತೆಗೆ ಸಂಬಂಧಿಸಿದಂತೆ ವಿಶೇಷ ಮಾಹಿತಿ ನೀಡುವ ವಿಶೇಷ ಸರಣಿ ಮಾರ್ಚ್ 16 ರಿಂದ ಮಾರ್ಚ್ 25 ರವರೆಗೆ ಮಧ್ಯಾಹ್ನ 2.35 ರಿಂದ 3.05 ಗಂಟೆಗೆಯವರೆಗೆ "ಬಾನ್ದನಿ" ಕಾರ್ಯಕ್ರಮ ಪ್ರಸಾರವಾಗುತ್ತದೆ.
ಮಾರ್ಚ್ 16 ರಂದು ಕನ್ನಡ ಪ್ರಥಮ ಭಾಷೆ, ಮಾರ್ಚ್ 17 ರಂದು ಇಂಗ್ಲೀಷ್ ದ್ವಿತೀಯ ಭಾಷೆ, ಮಾರ್ಚ್ 18 ರಂದು ಹಿಂದಿ ತೃತೀಯ ಭಾಷೆ, ಮಾರ್ಚ್ 19 ರಂದು ವಿಜ್ಞಾನ, ಮಾರ್ಚ್ 23 ರಂದು ಗಣಿತ, ಮಾರ್ಚ್ 24 ರಂದು ಸಮಾಜ ವಿಜ್ಞಾನ ಹಾಗೂ ಮಾರ್ಚ್ 25 ರಂದು ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನಿರ್ದೇಶಕರಿಂದ ಮಾಹಿತಿ ಪಡೆಯಬಹುದು.
ವಿಷಯ ಪರಿಣಿತರಾಗಿ ಜಿ.ಎಸ್. ಮುಂಬಡಿತ್ತಾಯ, ಎ.ಪಿ. ಗುಂಡಪ್ಪ, ಪಿ.ಜಿ. ಮಳೀಮಠ, ಎಂ.ಎಸ್. ಕೆಂಪಣ್ಣ, ಎ.ಬಿ. ಕಟ್ಟಿ, ಹೆಚ್. ವಿ. ಭಾಗ್ಯಲಕ್ಷ್ಮೀ, ವಿ.ಪಿ. ಧಾರುಕಾರಾಧ್ಯ, ಎ.ಎಸ್. ದೀಕ್ಷಿತ್, ಎನ್. ಸತ್ಯಪ್ರಕಾಶ್ ಪಾಲ್ಗೊಳ್ಳಲಿದ್ದು ಈ ಎಲ್ಲಾ ಕಾರ್ಯಕ್ರಮವನ್ನು ಎಸ್. ಆರ್. ಭಟ್ಟ್ ನಡೆಸಿಕೊಡಲಿದ್ದು ಈ ಕಾರ್ಯಕ್ರಮವು ರಾಜ್ಯದ 10 ಬಾನುಲಿ ಕೇಂದ್ರಗಳಿಂದ ಏಕಕಾಲದಲ್ಲಿ ಪ್ರಸಾರ ಮಾಡಲಿವೆ.
ಮಾರ್ಚ್ 10 ರಂದು ಮಧ್ಯಾಹ್ನ 2.35 ರಂದು ಪಿ.ಯು.ಸಿ. ಹಾಗೂ ಸಿ.ಇ.ಟಿ ಪರೀಕ್ಷೆಗೆ ಸಂಬಂಧಪಟ್ಟಂತೆ ವಿಶೇಷ ಸಂಚಿಕೆಯಲ್ಲಿ ಪದವಿಪೂರ್ವ ಶಿಕ್ಷಣ ಆಯುಕ್ತ ಎಸ್. ಬಿ. ಹೆಗಡೆ ಅವರು ಪಾಲ್ಗೊಳ್ಳಲಿದ್ದಾರೆ.
(ದಟ್ಸ್ ಕನ್ನ್ನಡ ವಾರ್ತೆ)