ಅಮೆರಿಕಾ ಮತ್ತು ಕೆನಡಾದಲ್ಲಿ ಯೋಗ ಜನಪ್ರಿಯ
ಪತಂಜಲಿ ಯೋಗಾಶ್ರಮ ಟ್ರಸ್ಟ್ ಸಹಯೋಗದೊಂದಿಗೆ ರಾಜ್ಯ ವಾರ್ತಾ ಇಲಾಖೆ ವ್ಯವಸ್ಥೆಗೊಳಿಸಿದ್ದ ಉತ್ತಮ ಆರೋಗ್ಯಕ್ಕಾಗಿ ಯೋಗ ಕುರಿತ ವಿಚಾರ ಸಂಕಿರಣವನ್ನು ಸೋಮವಾರ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಅಮೆರಿಕಾ ಮತ್ತು ಕೆನಡಾದಲ್ಲಿ ಬೇಡಿಕೆ ಇರುವ ಯೋಗಕ್ಕೆ ಭಾರತದಲ್ಲಿ ಪೂರ್ಣ ಪ್ರಮಾಣದಲ್ಲಿ ಮಾನ್ಯತೆ ದೊರೆಯದೇ ಇನ್ನೂ ಶೈಶವಾವಸ್ಥೆಯಲ್ಲಿರುವುದನ್ನು ಕಂಡರೆ ಅಚ್ಚರಿಯಾಗುತ್ತದೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.
ಯೋಗದಿಂದ ಆನೆ ಭಿಕ್ಷೆ ದೊರೆಯುತ್ತದೆ ಎಂದ ಪತಂಜಲಿ ಯೋಗಾಶ್ರಮ ಟ್ರಸ್ಟ್ ಧರ್ಮದರ್ಶಿ ರಘುಚಂದ್ರ ಗುರೂಜಿ ಅವರು, ತಮ್ಮ ಭಾಷಣದಲ್ಲಿ ಆ ಅಂದರೆ ಆರೋಗ್ಯ ಮತ್ತು ನೆ ಅಂದರೆ ನೆಮ್ಮದಿ ಎಂದು ಹೇಳಿ ನೆರೆದ ಜನಸ್ತೋಮವನ್ನು ನಗೆಗಡಲಲ್ಲಿ ಮುಳುಗಿಸಿದರು.
ಪತಂಜಲಿ ಯೋಗಾಶ್ರಮ ಟ್ರಸ್ಟ್ ಅಧ್ಯಕ್ಷ ಪ್ರಕಾಶ್ ಯೋಗಿ ಅವರು ಮಾತನಾಡಿ, ಕೋಟ್ಯಾಂತರ ಜೀವರಾಶಿಗಳಲ್ಲಿ ನಗುವ ಸಾಮರ್ಥ್ಯವಿರುವ ಮಾನವ ಇತ್ತೀಚಿನ ದಿನಗಳಲ್ಲಿ ನಗದೆಯೇ ಪ್ರಾಣಿಯಾಗುತ್ತಿದ್ದಾನೆ! ಬೀಗಿ ಬಾಳುವುದನ್ನು ತೊರೆದು ಬಾಗಿ ಬಾಳುವುದನ್ನು ಕಲಿತಾಗ ಮಾತ್ರ ನೆಮ್ಮದಿಯ ಬದುಕು ಸಾಧ್ಯ ಎಂದರು. ಹೆಸರಾಂತ ಗಾಯಕ ಸಿದ್ಧರಾಮ ಎಸ್ ಕೇಸಾಪುರ್ ಮತ್ತು ಅಮೃತ್ ಯೋಗಿ ಅವರ ಗಾನ ಸುಧೆ ಕಾರ್ಯಕ್ರಮದ ವಿಶೇಷತೆಗಳಲ್ಲೊಂದಾಗಿತ್ತು.
ವಾರ್ತಾ ಇಲಾಖೆಯ ಉಪ ನಿರ್ದೇಶಕ ಡಿ.ಪಿ. ಮುರಳೀಧರ್, ಯೋಗಾಚಾರ್ಯರಾದ ಮಹೇಶ್ ಶಾಸ್ತ್ರಿ, ಹಾಗೂ ವೈ.ಹೆಚ್. ಪುಟ್ಟರಾಜು ಅವರೂ ಸೇರಿದಂತೆ ಹಲವು ಗಣ್ಯರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
(ದಟ್ಸ್ ಕನ್ನಡ ವಾರ್ತೆ)