ಸೇನೆ ಕಾರ್ಯಕರ್ತರ ಗಡಿಪಾರು, ಮುತಾಲಿಕ್ ಕಿಡಿ
ಮಂಗಳೂರು, ಮಾ. 2 : ಶ್ರೀರಾಮಸೇನೆಯ ಕಾರ್ಯಕರ್ತರನ್ನು ಗಡಿಪಾರು ಮಾಡಿರುವ ಸರ್ಕಾರದ ಕ್ರಮಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಶ್ರೀರಾಮಸೇನೆ ಮುಖಂಡ ಪ್ರಮೋದ್ ಮುತಾಲಿಕ್, ಹತ್ತು ಸಾವಿರ ಮಂದಿ ಕಾರ್ಯಕರ್ತರೊಂದಿಗೆ ಮಂಗಳೂರಿಗೆ ಬರುತ್ತೇವೆ, ನಿಮಗೆ ತಾಕತ್ತಿದ್ದರೆ ನಮ್ಮನ್ನು ತಡೆಯಿರಿ ಎಂದು ಜಿಲ್ಲಾಡಳಿತಕ್ಕೆ ಅವರು ಬಹಿರಂಗ ಸವಾಲು ಹಾಕಿದ್ದಾರೆ.
ಹಿಂದುತ್ವ ಮರೆತು ಕಾರ್ಯ ನಿರ್ವಹಿಸಿದ ಕಾಂಗ್ರೆಸ್ ಗತಿ ರಾಜ್ಯದಲ್ಲಿ ಏನಾಗಿದೆ ಎಂದು ನಿಮಗೆ ಚೆನ್ನಾಗಿ ಗೊತ್ತು. ನೀವು ಅಧಿಕಾರದ ಅಮಲಿನಲ್ಲಿ ರಾಜ್ಯ ನಡೆಸುತ್ತಿದ್ದಿರಾ, ರಾಜ್ಯದ ಜನತೆ ನಿಮಗೆ ಪಾಠ ಕಲಿಸುವ ಮುಂಚೆ ಎಚ್ಚೆತ್ತು ಕೊಳ್ಳಿ ಎಂದು ಬಿಜೆಪಿಗೆ ಬುದ್ದಿಮಾತು ಹೇಳಿದರು.
ಈ ಮಧ್ಯೆ ಪಿಂಕ್ ಚಡ್ಡಿ ಕಳುಹಿಸಿರುವವರ ವಿರುದ್ದ ಕ್ರಿಮಿನಲ್ ಮೊಕದ್ದಮೆ ಹೂಡುವುದಾಗಿ ಹೇಳಿರುವ ಮುತಾಲಿಕ್ ಹೇಳಿಕೆಗೆ ಪ್ರತಿಕ್ರಿಯಿಸಿರುವ ಕೇಂದ್ರ ಸಚಿವೆ ರೇಣುಕಾ ಚೌಧುರಿ, ಚಡ್ಡಿಯ ಬಣ್ಣ ಮುತಾಲಿಕ್ ಅವರಿಗೆ ಹಿಡಿಸಲಿಲ್ಲವೇನೂ ಅದಕ್ಕೆ ಕ್ರಿಮಿನಲ್ ಮೊಕದ್ದಮೆ ಹೂಡುತ್ತಿದ್ದಾರೆ ಎಂದು ಛೇಡಿಸಿದ್ದಾರೆ.
ಪಬ್ ಮೇಲಿನ ದಾಳಿಗೆ ಸಂಬಂಧಿಸಿದಂತೆ ಜಿಲ್ಲಾಡಳಿತ ಶ್ರೀರಾಮಸೇನೆಯ ಪ್ರಸಾದ್ ಅತ್ತಾವರ ಸೇರಿದಂತೆ ಐದು ಮಂದಿಗೆ ನಿಮ್ಮನ್ನು ಯಾಕೆ ಗಡಿಪಾರು ಮಾಡಬಾರದು ಎಂದು ವಿವರಣೆ ಕೇಳಿ ನೋಟಿಸ್ ಜಾರಿಗೊಳಿಸಿತ್ತು. ಅದರಲ್ಲಿ ಮೂರು ಮಂದಿ ತಡೆಯಾಜ್ಞೆ ತರುವಲ್ಲಿ ಯಶಸ್ವಿಯಾಗಿದ್ದರೆ ಉಳಿದ ಇಬ್ಬರಿಗೆ ಜಿಲ್ಲಾಡಳಿತ ಗಡಿಪಾರು ಮಾಡಿ ಆದೇಶ ಹೊರಡಿಸಿತ್ತು.
(ದಟ್ಸ್
ಕನ್ನಡ
ವಾರ್ತೆ)
ಶ್ರೀರಾಮಸೇನೆ
ಕಾರ್ಯಕರ್ತರಿಗೆ
ಗಡಿಪಾರು