ಲೋಕಸಭೆಗೆ ರಾಘವೇಂದ್ರ ಸ್ಪರ್ಧಿಸಲ್ಲ, ಯಡಿಯೂರಪ್ಪ
ಬೆಂಗಳೂರು, ಫೆ. 25 : ನನ್ನ ಮಗ ರಾಘವೇಂದ್ರ ಲೋಕಸಭೆ ಚುನಾವಣೆ ಸ್ಪರ್ಧಿಸುವುದಿಲ್ಲ ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ. ಬಿ ವೈ ರಾಘವೇಂದ್ರ ಅವರು ಶಿವಮೊಗ್ಗ ಲೋಕಸಭೆ ಕ್ಷೇತ್ರದಿಂದ ಬಂಗಾರಪ್ಪ ವಿರುದ್ಧ ಸ್ಪರ್ಧಿಸುತ್ತಾರೆ ಎಂದು ಈವರೆಗೂ ಎದ್ದಿದ್ದ ಎಲ್ಲ ಉಪಾಪೋಹಗಳಿಗೆ ತೆರೆ ಎಳೆದರು.
ಮಾಗಡಿ ರಸ್ತೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮಾತನಾಡಿದ ಅವರು, ತಮ್ಮ ಮಗ ಸ್ಪರ್ಧಿಸುವುದು ನನಗಿಷ್ಟವಿಲ್ಲ ಎಂದರು. ರಾಘವೇಂದ್ರನನ್ನು ಲೋಕಸಭೆ ಸ್ಪರ್ಧಿಸುವುದಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಮುಖಂಡರೂ ಸೇರಿದಂತೆ ರಾಜ್ಯದ ನಾಯಕರು ನನ್ನ ಮೇಲೆ ಭಾರಿ ಒತ್ತಡ ಹಾಕಿರುವುದು ನಿಜ. ಆದರೆ, ಬಿಜೆಪಿಯ ಕೆಲ ನಾಯಕರು ಈ ವಿಷಯವನ್ನು ಮುಂದಿಟ್ಟುಕೊಂಡು ರಾಜಕೀಯ ಮಾಡುತ್ತಿರುವುದೂ ನನ್ನ ಗಮನಕ್ಕೆ ಬಂದಿದೆ ಎಂದು ಆರೋಪಿಸಿದರು. ಪಕ್ಷದಲ್ಲೇ ಹರಕೆಯ ಕುರಿ ಮಾಡಲು ತಂತ್ರ ರೂಪಿಸುತ್ತಿರುವ ಶಂಕೆ ವ್ಯಕ್ತವಾಗಿದೆ ಎಂದು ಅವರು ಗಂಭೀರ ಆರೋಪ ಮಾಡಿದರು.
ಮಾಗಡಿ ರಸ್ತೆಯಲ್ಲಿ ನಿರ್ಮಾಣವಾಗುತ್ತಿರುವ ಜಂಕ್ಷನ್ ರಸ್ತೆಗೆ ಬಾಲಗಂಗಾಧರನಾಥ ಸ್ವಾಮೀಜಿ ಹೆಸರಿಡುವುದಾಗಿ ಘೋಷಿಸಿದ ಯಡಿಯೂರಪ್ಪ, ಸ್ವಾಮೀಜಿಗಳೊಂದಿಗೆ ಯಾವುದೇ ಮನಸ್ತಾಪವಿಲ್ಲ ಎಂದು ಸ್ಪಷ್ಟಪಡಿಸಿದರು. ನಾವುಗಳು ತಪ್ಪು ಮಾಡಿದಾಗಿ ತಿದ್ದುವ ಅಧಿಕಾರ ಶ್ರೀಗಳಿಗೆ ಇದೆ. ಶ್ರೀಗಳ ಆಶೀರ್ವಾದ ನಮ್ಮ ಮೇಲೆ ಸದಾ ಇರಬೇಕು ಎಂದು ಯಡಿಯೂರಪ್ಪ ಮನವಿ ಮಾಡಿಕೊಂಡರು.
(ದಟ್ಸ್ ಕನ್ನಡ ವಾರ್ತೆ)