ಸುಧಾಕರರಾವ್ ಕೇಂದ್ರ ಚು ಆಯುಕ್ತರಾಗಿ ನೇಮಕ ?
ನವದೆಹಲಿ, ಫೆ. 24 : ಕರ್ನಾಟಕದ ಮುಖ್ಯ ಕಾರ್ಯದರ್ಶಿ ಸುಧಾಕರರಾವ್ ಅವರನ್ನು ಚುನಾವಣಾ ಆಯೋಗಕ್ಕೆ ನೇಮಿಸುವ ಕುರಿತು ಕೇಂದ್ರ ಸರ್ಕಾರ ಈ ವಾರದ ಅಂತ್ಯದೊಳಗೆ ಅಧಿಸೂಚನೆ ಹೊರಡಿಸುವ ಸಾಧ್ಯತೆ ಇದೆ. ಮುಖ್ಯ ಆಯುಕ್ತ ಎನ್ ಗೋಪಾಲಸ್ವಾಮಿ ಅವರು ಏಪ್ರಿಲ್ 20 ರಂದು ನಿವೃತ್ತರಾಗಲಿದ್ದು, ಬಳಿಕ ಸುಧಾಕರರಾವ್ ಅವರು ಆಯುಕ್ತರಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ.
ಕೇಂದ್ರ ಚುನಾವಣಾ ಆಯೋಗ ಮುಂದಿನ ವಾರ ಲೋಕಸಭೆ ಚುನಾವಣಾ ದಿನಾಂಕ ಪ್ರಕಟಿಸಲಿದೆ. ಆ ಬಳಿಕ ಯಾವುದೇ ಅಧಿಸೂಚನೆ ಹೊರಡಿಸಲು ಕೇಂದ್ರ ಸರ್ಕಾರಕ್ಕೆ ಅಸಾಧ್ಯವಾಗುವ ಕಾರಣ ಸುಧಾಕರರಾವ್ ನೇಮಕಾತಿಗೆ ಸಂಬಂಧಿಸಿದ ಅಧಿಸೂಚನೆ ಶೀಘ್ರವೇ ಹೊರ ಬೀಳುವ ಸಾಧ್ಯತೆ ಇದೆ ಎನ್ನಲಾಗಿದೆ. 2014ರಲ್ಲಿ ನಡೆಯುವ ಮತ್ತೊಂದು ಲೋಕಸಭೆ ಚುನಾವಣೆಯ ತನಕವೂ ಸುಧಾಕರರಾವ್ ಅವರ ಅವಧಿ ಇರುವುದರಿಂದ ಹಾಗೂ ಆಯೋಗದಲ್ಲಿ ದಕ್ಷಿಣ ಭಾರತೀಯರೊಬ್ಬರು ಇರಬೇಕು ಎಂಬ ಕಾರಣಕ್ಕೆ ಸುಧಾಕರರಾವ್ ಹೆಸರನ್ನು ಕೇಂದ್ರ ಸರ್ಕಾರ ಪರಿಗಣಿಸಿದೆ.
ಸದ್ಯ ಚೀನಾ ರಾಯಭಾರಿಯಾಗಿರುವ ಸುಧಾಕರರಾವ್ ಅವರ ಪತ್ನಿ ನಿರುಪಮಾರಾವ್ ಅವರು ಜುಲೈನಲ್ಲಿ ವಿದೇಶಾಂಗ ಕಾರ್ಯದರ್ಶಿಯಾಗಿ ನೇಮಕಗೊಳ್ಳುವ ಸಾಧ್ಯತೆಗಳಿವೆ ಎನ್ನಲಾಗಿದೆ.
(ದಟ್ಸ್ ಕನ್ನಡ ವಾರ್ತೆ)
ಚುನಾವಣಾ ಆಯುಕ್ತರಾಗಿ ಸುಧಾಕರ್ ರಾವ್?