ಇಂದಿನಿಂದ ಅಧಿವೇಶನ, ಬಜೆಟ್ ಮೇಲೆ ಚಿತ್ತ
ಬೆಂಗಳೂರು, ಫೆ. 19 : ರಾಜ್ಯ ವಿಧಾನಮಂಡಲದ ಬಜೆಟ್ ಅಧಿವೇಶನ ಇಂದಿನಿಂದ ಆರಂಭವಾಗಲಿದ್ದು, ಪ್ರಮುಖ ಪಕ್ಷಗಳ ರಾಜಕೀಯ ಮೇಲಾಟಕ್ಕೆ ವೇದಿಕೆಯಾಗಲಿದೆ. ಜಾಗತಿಕ ಆರ್ಥಿಕ ಬಿಕ್ಕಟ್ಟು. ಸಂಪನ್ಮೂಲ ಕೊರತೆಯ ನಡುವೆ ಜನಮೆಚ್ಚುಗೆ ಗಳಿಸುವ ಬಜೆಟ್ ಮಂಡನೆಗೆ ಮುಖ್ಯಮಂತ್ರಿ ಯಡಿಯೂರಪ್ಪ ಕಸರತ್ತು ನಡೆಸಿದ್ದಾರೆ. ಹೀಗಾಗಿ ಪೂರ್ಣ ಪ್ರಮಾಣ ಬಜೆಟ್ ಮಂಡಿಸಿ ಲೇಖಾನುದಾನಕ್ಕೆ ಅನುಮತಿ ಕೋರುವ ನಿರೀಕ್ಷೆಯಿದೆ.
ಯಾವುದೇ ಕ್ಷಣದಲ್ಲಿ ಲೋಕಸಭೆ ಚುನಾವಣೆ ಅಧಿಸೂಚನೆ ಹೊರಬೀಳುವ ಸಾಧ್ಯತೆ ಇರುವುದರಿಂದ ಅಧಿವೇಶನ ಆರು ದಿನಕ್ಕೆ ಸೀಮಿತಗೊಳಿಸುವ ಸಾಧ್ಯತೆ ಹೆಚ್ಚು. ಆದ್ದರಿಂದ ಹಣಕಾಸು ವಿಧೇಯಕದ ಮೇಲಿನ ಚರ್ಚೆಗಿಂತ ಇತರೆ ವಿಷಯಗಳೇ ವಿಜೃಂಭಿಸುವುದು ಖಚಿತವಾಗಿದೆ. ರಾಜ್ಯ ರಾಜಕಾರಣದಲ್ಲಿ ಕೋಲಾಹಲ ಎಬ್ಬಿಸಿದ್ದ ಕೆಜಿಎಫ್ ಶಾಸಕ ಸಂಪಂಗಿ ಪ್ರಕರಣವೂ ಚರ್ಚೆಗೆ ಬರಲಿದೆ. ಈ ವಿಷಯದಲ್ಲಿ ಸ್ಪೀಕರ್ ಯಾವ ತೀರ್ಮಾನ ಕೈಗೊಳ್ಳಲಿದ್ದಾರೆ ಎಂಬುದನ್ನು ರಾಜ್ಯದ ಜನತೆ ಎದುರು ನೋಡುತ್ತಿದೆ.
ರಾಜ್ಯ ಕಾನೂನು ಸುವ್ಯವಸ್ಥೆ ಇತ್ತೀಚೆಗೆ ಪ್ರಮಖ ವಿಷಯವಾಗಿದ್ದು, ಮಂಗಳೂರು ಪಬ್ ದಾಳಿ, ಶ್ರೀರಾಮಸೇನೆ ದಾಂಧಲೆ, ಗಣಿ ವಿವಾದ, ರೈತರ ಮೇಲೆ ಲಾಠಿ ಪ್ರಹಾರ, ಸ್ವಯಂ ಘೋಷಿತ ಆಸ್ತಿ ತೆರಿಗೆ ಪದ್ಧತಿಯಲ್ಲಿನ ಗೊಂದಲ, ಬೆಂಗಳೂರಿನಲ್ಲಿ ನಡೆಯುತ್ತಿರುವ ಕೊಲೆ ಪ್ರಕರಣಗಳು, ಭಯೋತ್ಪಾದನೆ ವಿರೋಧಿ ಅಭಿಯಾನ ಚರ್ಚೆಯ ವಿಷಯಗಳಾಗಿವೆ.
(ದಟ್ಸ್ ಕನ್ನಡ ವಾರ್ತೆ)