ಕೊನೆಗೂ ಕಾಂಗ್ರೆಸ್ ಪರ ಕೈ ಎತ್ತಿದ ಅಜರ್
ನವದೆಹಲಿ, 19 : ಮಾಜಿ ಕ್ರಿಕೆಟ್ಟಿಗ ಅಜರುದ್ದೀನ್ ಅವರು ಇಂದು ಕಾಂಗ್ರೆಸ್ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆ ಆದರು. ಕಳೆದ ಕೆಲವು ವಾರಗಳಿಂದ ರಾಜಕೀಯಕ್ಕೆ ಅಜರ್ ಸೇರ್ಪಡೆ ಬಗ್ಗೆ ವದಂತಿ ಹಬ್ಬಿತ್ತು. ಅದಕ್ಕೆಇಂದು ತೆರೆ ಬಿತ್ತು. ನಾನು ಪಕ್ಷವಹಿಸುವ ಯಾವುದೇ ಜವಾಬ್ದಾರಿಯನ್ನು ಹೊರಲು ಸಿದ್ಧನಿದ್ದೇನೆ ಎಂದು ದೆಹಲಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಘೋಷಿಸಿದರು.
ಕಾಂಗ್ರೆಸ್ ಪಕ್ಷದ ಅಧ್ಯಕ್ಷೆ ಸೋನಿಯಾಗಾಂಧಿ ಅವರ ಒಪ್ಪಿಗೆ ಮೇರೆಗೆ ಅಜರುದ್ದೀನ್ ಅವರ ಸೇರ್ಪಡೆಯಾಗಿದೆ ಎಂದು ವೀರಪ್ಪ ಮೋಯ್ಲಿ ಸುದ್ದಿಯನ್ನು ಖಚಿತ ಪಡಿಸಿದ್ದಾರೆ. ಆದರೆ ಮುಂಬರುವ ಲೋಕಸಭೆಯಲ್ಲಿ ಯಾವ ಕ್ಷೇತ್ರದಿಂದ ಅಜರ್ ಸ್ಪರ್ಧಿಸಲಿದ್ದಾರೆ ಎಂಬ ಗುಟ್ಟನ್ನು ಬಿಟ್ಟುಕೊಟ್ಟಿಲ್ಲ. ಭಾರತ ಕ್ರಿಕೆಟ್ ಕಂಡಉತ್ತಮ ನಾಯಕರಲ್ಲಿ ಅಜರ್ ಕೂಡ ಒಬ್ಬರು. ಅವರನ್ನು ನಾನು 25 ವರ್ಷಗಳಿಂದ ಬಲ್ಲೆ. ಅವರ ಮೇಲೆ ಯಾವುದೇ ಕ್ರಿಮಿನಲ್ ಮೊಕದ್ದಮೆ ಇಲ್ಲ. ಎಂದು ಮೊಯ್ಲಿ ಸ್ಪಷ್ಟಪಡಿಸಿದ್ದಾರೆ.
ಅಜರ್ ಅವರು ಕಲಾತ್ಮಕ ಬ್ಯಾಟ್ ಮನ್ ಹಾಗೂ ಉತ್ತಮ ಫೀಲ್ಡರ್ ಆಗಿದ್ದರು. ಜೊತೆಗೆ ಭಾರತ ತಂಡ ನಾಯಕರಾಗಿ ಕೂಡ ಕರ್ತವ್ಯ ನಿರ್ವಹಿಸಿದ್ದಾರೆ. ಟೆಸ್ಟ್ ಹಾಗೂ ಏಕದಿನ ಪಂದ್ಯಗಳು ಸೇರಿ 15 ಸಾವಿರಕ್ಕೂ ಅಧಿಕ ರನ್ ಗಳನ್ನು ಗಳಿಸಿ, 15 ವರ್ಷ ಮೈದಾನದಲ್ಲಿ ಬೆವರಿಳಿಸಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)