ಮುಂದಿನ ಚುನಾವಣೆಯಲ್ಲಿ ನೀವೆಲ್ಲ ಸೋಲುತ್ತೀರ
ನವದೆಹಲಿ ಫೆ 19: ಜನ ಸೇವೆಗೆಂದು ಆಯ್ಕೆಯಾದ ಸಂಸದರು ನೀವು, ಸದನದಲ್ಲಿ ಇದೇ ರೀತಿ ಅನಾಗರೀಕರಂತೆ ವರ್ತಿಸಿ ಕಲಾಪ ಮುಂದೂಡುತ್ತಾ ಬಂದರೆ ಸಾಯುವ ತನಕ ಮುಂದೂಡುತ್ತಲೇ ಬರಬೇಕಾಗುತ್ತದೆ. ಸಾರ್ವಜನಿಕರ ಹಣ ಬಳಸುವ ಒಂದು ಪೈಸಾ ಯೋಗ್ಯತೆ ಕೂಡಾ ನಿಮಗಿಲ್ಲ. ಮುಂದಿನ ಚುನಾವಣೆಯಲ್ಲಿ ನೀವೆಲ್ಲಾ ಸೋತು ಹೋಗಿ ಜವಾಬ್ದಾರಿಯುತ ಸಂಸದರು ಆಯ್ಕೆಯಾಗಬೇಕು ಎಂದು ಗುಡುಗಿದವರು ನಿರ್ಗಮಿಸುತ್ತಿರುವ ಲೋಕಸಭಾ ಸ್ಪೀಕರ್, ಹಿರಿಯ ಮುತ್ಸದ್ದಿ ಸೋಮನಾಥ್ ಚಟರ್ಜಿ.
ಇಂದು ಬೆಳಿಗ್ಗೆ ಕಲಾಪ ಶುರುವಾಗುತ್ತಿದ್ದಂತೆಯೇ ಎನ್ ಡಿ ಎ ಮಿತ್ರಪಕ್ಷಗಳ ಸಂಸದರು ಯುಪಿಎ ಸರಕಾರದ ವೈಫಲ್ಯತೆ ಖಂಡಿಸಿ ಸದನದ ಬಾವಿಯ ಬಳಿ ಆಗಮಿಸಿ ಘೋಷಣೆ ಕೂಗುತ್ತಾ ಪ್ರಶ್ನೋತ್ತರ ವೇಳೆಗೆ ಅಡ್ಡಿಪಡಿಸಿದರು. ಇದರಿಂದ ತಾಳ್ಮೆ ಕಳೆದುಕೊಂಡ ಚಟರ್ಜಿ ಈ ರೀತಿ ಸಂಸದರನ್ನ ತರಾಟೆಗೆ ತೆಗೆದುಕೊಂಡರು.
ಎನ್ ಡಿ ಎ ಮಿತ್ರಪಕ್ಷಗಳಾದ ಬಿ ಎಸ್ ಪಿ , ಬಿಜೆಪಿ, ಟಿಡಿಪಿ, ಆರ್ ಪಿ ಐ , ಪಿಎಂಕೆ ಹಾಗೂ ಎಂಡಿಎಂಕೆ ಪಕ್ಷದ ಸದಸ್ಯರುಗಳು ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತ ಬಾವಿಯ ಬಳಿ ಪ್ರತಿಭಟನೆ ನಡೆಸುತ್ತಿದ್ದ ಸಮಯದಲ್ಲಿ, ಸಂಸದರಿಗೆ ತಾಳ್ಮೆಯಿಂದ ಇರಿ ಎಂದು ಸ್ಪೀಕರ್ ಚಟರ್ಜಿ ಹಲವು ಬಾರಿ ಮನವಿ ಮಾಡಿಕೊಂಡರೂ ಕೇಳದಿದ್ದಾಗ ಅವರು ಮೇಲಿನಂತೆ ಆಕ್ರೋಶ ವ್ಯಕ್ತಪಡಿಸಿದರು.
(ಏಜೆನ್ಸೀಸ್)