ಎಸ್ ಬಿಐ ಉದ್ಯೋಗಿಗಳ ದೇಶವ್ಯಾಪಿ ಮುಷ್ಕರ
ಬೆಂಗಳೂರು, ಫೆ. 17 : ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಸೇರಿದಂತೆ ಸ್ಟೇಟ್ ಬ್ಯಾಂಕ್ ಇಂಡಿಯಾದ ಸಹವರ್ತಿ ಬ್ಯಾಂಕುಗಳ ಉದ್ಯೋಗಿಗಳು ಎಸ್ ಬಿಐ ಜತೆ ಸಹವರ್ತಿ ಬ್ಯಾಂಕುಗಳ ವಿಲೀನ ವಿರೋಧಿಸಿ ಇಂದು ದೇಶಾದ್ಯಂತ ಮುಷ್ಕರ ಆರಂಭಿಸಿದ್ದು, ಈ ಬ್ಯಾಂಕಿಗೆ ಸಂಬಂಧಿಸಿದ ಎಲ್ಲ ವ್ಯವಹಾರಗಳು ಸಂಪೂರ್ಣವಾಗಿ ಸ್ಥಗಿತಗೊಂಡಿವೆ. ಬೆಂಗಳೂರಿನಲ್ಲಿಯೂ ಕೂಡ ಮುಷ್ಕರ ಬಿಸಿ ತಾಗಿದ್ದು, ಗ್ರಾಹಕರು ಪರದಾಡುವಂತಾಗಿದೆ. ಉದ್ಯೋಗಿಗಳು ಮಾತ್ರ ಕೆಲಸಕ್ಕೆ ರಜೆ ಹಾಕಿ ಮುಷ್ಕರದಲ್ಲಿ ನಿರತರಾಗಿದ್ದಾರೆ.
ದೇಶಾದ್ಯಂತ ಸುಮಾರು 60 ಸಾವಿರಕ್ಕೂ ಅಧಿಕ ಉದ್ಯೋಗಿಗಳು ಮುಷ್ಕರದಲ್ಲಿ ಪಾಲ್ಗೊಂಡಿದ್ದಾರೆ. ಎಸ್ ಬಿ ಐ ಜತೆಗೆ ಸಹವರ್ತಿ ಬ್ಯಾಂಕುಗಳ ವಿಲೀನ ಪ್ರಕ್ರಿಯೆಯನ್ನು ಕೈಬಿಡಬೇಕು ಎನ್ನುವುದು ಪ್ರಮುಖ ಬೇಡಿಕೆಯಾಗಿದ್ದು, ಇತರೆ ಬ್ಯಾಂಕುಗಳ ಉದ್ಯೋಗಿಗಳು ಪಡೆಯುತ್ತಿರುವ ಸವಲತ್ತುಗಳನ್ನು ನಮಗೂ ನೀಡಬೇಕು ಎನ್ನುವುದು ಮುಷ್ಕರ ನಿರತರ ಪ್ರಮುಖ ಬೇಡಿಕೆಯಾಗಿದೆ. ಸವಲತ್ತುಗಳ ವಿಸ್ತರಣೆ, ಕಡಿಮೆ ಬಡ್ಡಿ ದರದಲ್ಲಿ ಮನೆ ಸಾಲ ನೀಡುವುದು. ಒವರ್ ಡ್ರಾಫ್ಟ್ ಫೆಸಿಲಿಟಿ, ಫೆಸ್ಟಿವಲ್ ಲೋನ್ ಗಳನ್ನು ನೀಡುವುದು ಇತರ ಬೇಡಿಕೆಗಳಾಗಿವೆ.
ಎಸ್ ಬಿಐ ಆಡಳಿತ ಮಂಡಳಿಯೊಂದಿಗೆ ನಡೆದ ಮಾತುಕತೆ ವಿಫಲವಾಗಿದ್ದರಿಂದ ಒಂದು ದಿನದ ದೇಶವ್ಯಾಪಿ ಮುಷ್ಕರ ನಡೆಸುತ್ತಿರುವುದಾಗಿ ಪ್ರತಿಭಟನಾಕಾರರು ಸ್ಪಷ್ಟಪಡಿಸಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)