ಎಸ್ಪಿ ಸಂಸದ ಸ್ಥಾನಕ್ಕೆ ಬಂಗಾರಪ್ಪ ರಾಜೀನಾಮೆ
ನವದೆಹಲಿ, ಫೆ. 12 : ಕೊನೆಗೂ ಮಾಜಿ ಮುಖ್ಯಮಂತ್ರಿ ಎಸ್ ಬಂಗಾರಪ್ಪ ಸಮಾಜವಾದಿ ಪಕ್ಷದ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಶೀಘ್ರದಲ್ಲಿ ಅವರು ಕಾಂಗ್ರೆಸ್ ಸೇರಲಿದ್ದು, ಶಿವಮೊಗ್ಗ ಲೋಕಸಭೆ ಕ್ಷೇತ್ರದಿಂದ ಕಣಕ್ಕಿಳಿಯುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ. ಈ ಮಧ್ಯೆ ಕಾಂಗ್ರೆಸ್ ಕಾರ್ಯಾಧ್ಯಕ್ಷ ಡಿಕೆ ಶಿವಕುಮಾರ್, ಬಂಗಾರಪ್ಪ ನಿಲುವನ್ನು ಸ್ವಾಗತಿಸಿದ್ದು, ದಕ್ಷ ನಾಯಕ ಎಂದು ಬಣ್ಣಿಸಿದ್ದಾರೆ.
ನಂತರ ಪ್ರತಿಕ್ರಿಯಿಸಿರುವ ಬಂಗಾರಪ್ಪ, ಸಮಾಜವಾದಿ ಪಕ್ಷ ಮತ್ತು ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿರುವುದಾಗಿ ಸ್ಪಷ್ಟಪಡಿಸಿದರು. ಶೀಘ್ರದಲ್ಲಿ ಕಾಂಗ್ರೆಸ್ ಪಕ್ಷವನ್ನು ಸೇರುವುದಾಗಿಯೂ ಘೋಷಿಸಿದರು. ರಾಜೀನಾಮೆ ಪತ್ರವನ್ನು ಲೋಕಸಭಾಧ್ಯಕ್ಷರಿಗೆ ಕಳುಹಿಸಿರುವುದಾಗಿ ಹೇಳಿದರು.
ಶಿವಮೊಗ್ಗ ಲೋಕಸಭೆ ಕ್ಷೇತ್ರದಿಂದ ಸ್ಪರ್ಧೆಗಿಳಿಯಲು ಬಂಗಾರಪ್ಪ ಉತ್ಸುಕರಾಗಿದ್ದಾರೆ. ಕೆಪಿಸಿಸಿ ಕೂಡ ಇದಕ್ಕೆ ತೆಲೆ ಆಡಿಸುವ ಸಾಧ್ಯತೆಗಳಿವೆ. ಇನ್ನೊಂದು ಮಹತ್ವದ ಅಂಶವೆಂದರೆ ಈ ಸಲದ ಲೋಕಸಭೆ ಚುನಾವಣೆಯಲ್ಲಿ ಶಿವಮೊಗ್ಗದಿಂದ ಮುಖ್ಯಮಂತ್ರಿ ಯಡಿಯೂರಪ್ಪ ಪುತ್ರ ಬಿ ಎಸ್ ರಾಘವೇಂದ್ರ ಅವರನ್ನು ಅಖಾಡಕ್ಕೆ ಇಳಿಸಲು ಜಿಲ್ಲಾ ಘಟಕ ಬಿಜೆಪಿ ವರಿಷ್ಠ ಮೇಲೆ ತೀವ್ರ ಒತ್ತಡ ಹಾಕಿದೆ. ಸಚಿವ ಹರತಾಳು ಹಾಲಪ್ಪ ಕೂಡ ರಾಘವೇಂದ್ರ ಅವರನ್ನು ಲೋಕಸಭೆ ಸ್ಪರ್ಧೆಸಲು ಸಮ್ಮತಿ ನೀಡಬೇಕು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಮನವಿ ಮಾಡಿಕೊಂಡಿದ್ದಾರೆ.
ಈ ಎಲ್ಲ ಬೆಳವಣಿಗೆ ನಡುವೆ ತಮ್ಮ ಪುತ್ರನ ಸ್ಪರ್ಧೆಗೆ ಸಂಬಂಧಿಸಿದಂತೆ ಒಂದು ಬಾರಿ ಕಾರ್ಯಕರ್ತರ ಅಭಿಪ್ರಾಯ ಎಂದಿರುವ ಯಡಿಯೂರಪ್ಪ, ಇನ್ನೊಂದು ಸಲ ರಾಘವೇಂದ್ರ ಸ್ಪರ್ಧಿಸಲ್ಲ ಎಂದು ಹೇಳಿಕೆ ನೀಡಿದ್ದಾರೆ. ಇದೀಗ ಬಂಗಾರಪ್ಪ ಕಾಂಗ್ರೆಸ್ ಸೇರಿ ಅಖಾಡಕ್ಕೆ ಇಳಿಯಪುವ ಮುನ್ಸೂಚನೆ ನೀಡಿರುವುದು ಮತ್ತಷ್ಟು ಕುತೂಹಲಕ್ಕೆ ಕಾರಣವಾಗಿದೆ.
(ದಟ್ಸ್ ಕನ್ನಡ ವಾರ್ತೆ)