ಸರಣಿ ಸ್ಫೋಟ : ಕೇರಳ ಮೂಲದ 9 ಉಗ್ರರ ಬಂಧನ
ಎಲ್ಲ 9 ಬಂಧಿತರು ಕೇರಳದ ಮೂಲದ ಉಗ್ರ ಸಂಘಟನೆಗೆ ಸೇರಿದವರು. ವಿಚಾರಣೆಯಲ್ಲಿ ಭಯೋತ್ಪಾದನೆ ಹಬ್ಬಿಸಲೆಂದೇ ಸರಣಿ ಬಾಂಬ್ ಸ್ಫೋಟ ನಡೆಸಿದ್ದಾಗಿ ಒಪ್ಪಿಕೊಂಡಿದ್ದಾರೆ. ಇವರ ಬಂಧನದಿಂದಾಗಿ ಭಾರೀ ಕಗ್ಗಂಟಾಗಿದ್ದ ಸರಣಿ ಬಾಂಬ್ ಸ್ಫೋಟ ಪ್ರಕರಣವನ್ನು ಭೇದಿಸಿದಂತಾಗಿದೆ.
ಬಂಧಿತರು : ಅಬ್ದುಲ್ ಸತ್ತಾರ್, ಮುಜೀಬ್, ಬದ್ರುದ್ದಿನ್, ಫಕ್ರಿಯಾ, ಅಬ್ದುಲ್ ಜಬ್ಬಾರ್, ಮುನಾಫ್, ಸಫ್ರುದ್ದಿನ್, ಅಬ್ದುಲ್ ಜಲೀಲ್ ಮತ್ತು ಫೈಜಲ್. ಹೈದರಾಬಾದಿನಲ್ಲಿ ಬಂಧಿತನಾದ ಸತ್ತಾರ್ ನೀಡಿದ ಸುಳಿವಿನ ಮೇರೆಗೆ ಉಳಿದವರನ್ನು ಕೇರಳದಲ್ಲಿ ಬಂಧಿಸಲಾಗಿದೆ. ತಂಡದಲ್ಲಿ ಇನ್ನೂ ಕೆಲವರು ಉಳಿದಿದ್ದು, ಅವರಿಗಾಗಿ ಹುಡುಕಾಟ ಸಾಗಿದೆ.
ಕಳೆದ ವರ್ಷದ ಜುಲೈ 25ರಂದು ಬೆಂಗಳೂರಿನ 8 ಸ್ಥಳಗಳಲ್ಲಿ ಸಣ್ಣ ಪ್ರಮಾಣದ 9 ಸರಣಿ ಸ್ಫೋಟಗಳು ಸಂಭವಿಸಿದ್ದವು. ಇದರಲ್ಲಿ ಓರ್ವ ಮಹಿಳೆ ಸತ್ತು ಒಂಬತ್ತು ಜನ ಗಾಯಗೊಂಡಿದ್ದರು. ಈ ಸರಣಿ ಸ್ಫೋಟಗಳ ಹೊಣೆಯನ್ನು ಯಾವ ಸಂಘಟನೆಗಳೂ ಹೊತ್ತುಕೊಂಡಿದ್ದಿಲ್ಲ.
ಪೊಲೀಸ್ ಮಹಾನಿರ್ದೇಶಕ ಅಜಯ್ ಸಿಂಗ್, ಬೆಂಗಳೂರು ಪೊಲೀಸ್ ಆಯುಕ್ತ ಶಂಕರ್ ಬಿದರಿ ಮತ್ತು ರಾಜ್ಯ ಪೊಲೀಸರ ನೇತೃತ್ವ ವಹಿಸಿದ್ದ ಗೋಪಾಲ್ ಹೊಸೂರ್ ಅವರು ಜಂಟಿಯಾಗಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಆರೋಪಿಗಳ ಮತ್ತು ಅವರ ಸಂಚಿನ ಬಗ್ಗೆ ವಿವರ ನೀಡಿದರು.
ಸ್ಫೋಟಗಳ ಹೊಣೆಯನ್ನು ಯಾವ ಸಂಘಟನೆಯೂ ಹೊತ್ತಿದ್ದಿಲ್ಲ, ಸ್ಫೋಟಗೊಂಡ ಸ್ಥಳಗಳಲ್ಲಿ ಬೆರಳಿನ ಗುರುತುಗಳು ಸಿಕ್ಕಿದ್ದಿಲ್ಲ, ಅವರು ಯಾವ ಸುಳಿವೂ ನೀಡಿದ್ದಿಲ್ಲ. ಇದರಿಂದಾಗಿ ಅವರನ್ನು ಹುಡುಕುವುದು ಭಾರೀ ಸವಾಲಿನದಾಗಿತ್ತು. ಆದರೂ, ಪಟ್ಟು ಬಿಡದ ರಾಜ್ಯದ ಪೊಲೀಸರು ಆಂಧ್ರ, ಕೇರಳ, ಗುಜರಾತ್ ಪೊಲೀಸರ ಸಹಾಯದಿಂದ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಶಂಕರ್ ಬಿದರಿ ಹೇಳಿದರು.
(ದಟ್ಸ್ ಕನ್ನಡ ವಾರ್ತೆ)
ಪೂರಕ
ಓದಿಗೆ
ಬೆಂಗಳೂರಿಗರಿಗೆ
ಇಂದು
ಕರಾಳ
ಶುಕ್ರವಾರ
ಬೆಂಗಳೂರು
ಸರಣಿ
ಸ್ಫೋಟ
ಎಲ್ಲಿ,
ಯಾವಾಗ?