ಮುಮ್ತಾಜಳ ರಕ್ಷಣೆಗೆ ಸಾವಿರಾರು ತುಳಸಿಯರು
ಅತಿಯಾದ ಕೈಗಾರಿಕೆಗಳ ಸ್ಥಾಪನೆ ಹಾಗೂ ವಾಹನಗಳು ಉಗುಳುವ ಹೊಗೆಯಿಂದಾಗಿ ಐತಿಹಾಸಿಕ ತಾಜ್ ಮಹಲ್ ಪರಿಸರದ ಸಮಸ್ಯೆ ಎದುರಿಸುತ್ತಿದೆ. ಇದರಿಂದಾಗಿ ಶುಭ್ರವಾಗಿರುವ ತಾಜ್ ಮಹಲ್ ದಿನದಿಂದ ದಿನಕ್ಕೆ ಹಳದಿ ಬಣ್ಣಕ್ಕೆ ತಿರುಗುತ್ತಿದೆ. ಈ ಐತಿಹಾಸಿಕ ಸ್ಮಾರಕಕ್ಕೆ ಆಗುತ್ತಿರುವ ಧಕ್ಕೆ ತಪ್ಪಿಸಲು ಉತ್ತರ ಪ್ರದೇಶ ಸರ್ಕಾರ ಅನೇಕ ಕ್ರಮಗಳನ್ನು ಕೈಗೊಂಡಿದೆಯಾದರೂ ಗಿಟ್ಟುತ್ತಿಲ್ಲ. ತಾಜ್ ಮಹಲ್ ರಕ್ಷಣೆಗೆ ಪಣತೊಟ್ಟಿರುವ ಸರ್ಕಾರ ಇದೀಗ ಇನ್ನೊಂದು ವಿನೂತನ ಪ್ರಯತ್ನಕ್ಕೆ ಕೈಹಾಕಿದೆ. ತಾಜ್ ಮಹಲ್ ಸುತ್ತಲೂ ತುಳಿಸಿ ಗಿಡಗಳನ್ನು ನೆಟ್ಟರೆ ಹೇಗೆ?
ತುಳಸಿ ಗಿಡ ಔಷಧೀಯ ಸಸ್ಯ ಎನ್ನುವುದು ಗೊತ್ತಿರುವ ಸಂಗತಿ. ಇದರಿಂದ ಅತ್ಯಧಿಕ ಪ್ರಮಾಣದಲ್ಲಿ ಹೊರಸೂಸುವ ಅಮ್ಲಜನಕ ಮಾರ್ಬಲ್ ನಿಂದ ನಿರ್ಮಾಣವಾಗಿರುವ ತಾಜ್ ಮಹಲ್ ಗೆ ಆಗುತ್ತಿರುವ ಧಕ್ಕೆ ತಡೆಹಿಡಿಯಲಿದೆ. ಹಾಗೂ ಕೈಗಾರಿಕೆಗಳು ಹಾಗೂ ವಾಹನಗಳಿಂದ ಹೊರಬರುವ ಪರಿಸರ ಮಾಲಿನ್ಯ ತಡೆಗಟ್ಟಲು ಸಾದ್ಯ. ಆದ್ದರಿಂದ ತಾಜ್ ಮಹಲ್ ಸುತ್ತಲೂ ಸಾವಿರಾರು ತುಳಸಿ ಗಿಡಗಳನ್ನು ನೆಡಲು ಉತ್ತರ ಪ್ರದೇಶ ಸಿದ್ದತೆ ನಡೆಸಿದೆ ಎಂದು ಉತ್ತರ ಪ್ರದೇಶದ ವಲಯ ಅರಣ್ಯಾಧಿಕಾರಿ ಆರ್ ಪಿ ಬಾರ್ತಿ ತಿಳಿಸಿದ್ದಾರೆ.
ಆಗ್ರಾದಲ್ಲಿರುವ ಈ ಐತಿಹಾಸಿಕ ಸ್ಮಾರಕಕ್ಕೆ ರಕ್ಷಣೆಗಾಗಿ ಉತ್ತರ ಪ್ರದೇಶ ಸರ್ಕಾರ ತಾಜ್ ಮಹಲ್ ಸಮೀಪ ವಾಯುಮಾಲಿನ್ಯ ಪರಿವೀಕ್ಷಣಾ ಕೇಂದ್ರವನ್ನು ಸ್ಥಾಪಿಸಿದೆ. ಅದರೆ, ಅದರಿಂದ ತಾಜ್ ಮಹಲ್ ಮೇಲೆ ಆಗುತ್ತಿರುವ ಧಕ್ಕೆಯನ್ನು ತಡೆಯಲು ಸಾಧ್ಯವಾಗಿಲ್ಲ. ಈ ಹಿನ್ನೆಲೆಯಲ್ಲಿ ತುಳಸಿ ಗಿಡಗಳನ್ನು ನೆಡುವ ಮೂಲಕ ಪರಿಸರ ಶುದ್ಧಿಯಾಗಿರಿಸಲು ಸರ್ಕಾರ ಕೈಹಾಕಿದೆ. ಹಿಂದೂಗಳ ಮನೆಯಲ್ಲಿ ತುಳಸಿ ಗಿಡಗಳನ್ನು ತಪ್ಪದೆ ಇಡುವುದಕ್ಕೆ ಆ ಸಸ್ಯದ ಗುಣಮುಖಿ ಗುಣಗಳೇ ಕಾರಣವಿರಬಹುದಲ್ಲವೆ?
(ದಟ್ಸ್ ಕನ್ನಡ ವಾರ್ತೆ)
ಅಂದಹಾಗೆ, ತಾಜ್ ಮಹಲ್ ಕಟ್ಟಡ ವೈದಿಕ ಸಂಪ್ರದಾಯಕ್ಕೆ ಸೇರಿದ್ದ ಒಂದು ದೇವಾಲಯವಾಗಿತ್ತೇ?