ಮಂಗಳೂರಿನಲ್ಲಿ ಬ್ಯಾಂಕ್ ಲೂಟಿ, 40 ಲಕ್ಷ ಕಳ್ಳತನ
ಮಂಗಳೂರು, ಫೆ. 5 : ನಗರದ ಲಕ್ಷ್ಮಿ ಸೌಹಾರ್ದ ಸಹಕಾರಿ ಬ್ಯಾಂಕ್ ನ ಷಟರ್ ಮುರಿದು ಲಾಕರ್ ನಲ್ಲಿದ್ದ ಸುಮಾರು 40 ಲಕ್ಷ ರುಪಾಯಿ ನಗನಾಣ್ಯ ದೋಚಿಕೊಂಡು ಪರಾರಿಯಾಗಿರುವ ಘಟನೆ ಇಂದು ಬೆಳಗ್ಗೆ 10 ಹೊತ್ತಿಗೆ ಬೆಳಕಿಗೆ ಬಂದಿದೆ.
ಘಟನೆ ತಿಳಿಯುತ್ತಿದ್ದಂತೆಯೇ ಬ್ಯಾಂಕ್ ಗೆ ದೌಡಾಯಿಸಿದ ಪೊಲೀಸರು ಶೋಧ ಕಾರ್ಯದಲ್ಲಿ ನಿರತರಾಗಿದ್ದಾರೆ. ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ. ದರೋಡೆಕೋರರ ಪತ್ತೆಗಾಗಿ ಶ್ವಾನದಳವನ್ನು ಬಳಸಲಾಗಿದೆ. ಇದೊಂದು ವ್ಯವಸ್ಥಿತ ಸಂಚು ಇರಬಹುದೆಂದು ಪೊಲೀಸರು ಸಂಶಯ ವ್ಯಕ್ತಪಡಿಸಿದ್ದಾರೆ.
ಬುಧವಾರ ರಾತ್ರಿಯೇ ಕಳ್ಳತನ ನಡೆದಿದೆ ಎಂದು ಅಂದಾಜಿಸಲಾಗಿದ್ದು, ಬ್ಯಾಂಕ್ ಷಟರ್ ಮುರಿದ ದರೋಡೆಕೋರರು ಲಾಕರ್ ನಲ್ಲಿದ್ದ ಅಷ್ಟೂ ಹಣವನ್ನು ತೆಗೆದುಕೊಂಡು ಪರಾರಿಯಾಗಿದ್ದಾರೆ. ಆದರೆ, ಬ್ಯಾಂಕ್ ನಲ್ಲಿ ಎಚ್ಚರಿಕೆ ಗಂಟೆಯಿದ್ದರೂ ಬಾರಿಸದಿರುವುದು ಅನೇಕ ಸಂಶಯಗಳಿಗೆ ಕಾರಣವಾಗಿದೆ ಎನ್ನಲಾಗಿದೆ. ಮಂಗಳೂರಿನ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ.
(ದಟ್ಸ್ ಕನ್ನಡ ವಾರ್ತೆ)