ಸತ್ಯಂ ಪ್ರಕರಣ, ಸೆಬಿಯಿಂದ ರಾಜು ವಿಚಾರಣೆ ಆರಂಭ
ಹೈದರಾಬಾದ್, ಫೆ. 4 : ಸತ್ಯಂ ಕಂಪನಿಯ ಮಾಜಿ ಮುಖ್ಯಸ್ಥ ರಾಮಲಿಂಗರಾಜು ಹಾಗೂ ಅವರ ಸಹೋದರ ರಾಮರಾಜು ಅವರ ವಿಚಾರಣೆಯನ್ನು ಸೆಬಿ (ಭಾರತೀಯ ಮಾರುಕಟ್ಟೆ ಹಾಗೂ ಭದ್ರತಾ ಮಂಡಳಿ) ಇಂದು ಆರಂಭಿಸಿದೆ. 7800 ಕೋಟಿ ರುಪಾಯಿಗಳ ಅವ್ಯವಹಾರ ಮಾಡಿದ ಆರೋಪ ಎದುರಿಸುತ್ತಿರುವ ರಾಮಲಿಂಗರಾಜು ಅವರ ವಿಚಾರಣೆ ನಡೆಸಲು ಮಂಗಳವಾರ ಸುಪ್ರಿಂಕೋರ್ಟ್ ಅನುಮತಿ ನೀಡಿತ್ತು.
ಹೈದರಾಬಾದ್ ಪೊಲೀಸರ ಸಮ್ಮುಖದಲ್ಲಿ ಸೆಬಿ ಅಧಿಕಾರಿಗಳು ರಾಮಲಿಂಗರಾಜು ಅವರನ್ನು ವಿಚಾರಣೆ ನಡೆಸಬೇಕಾಗಿದ್ದು, ಸುಮಾರು 7800 ಕೋಟಿ ರುಪಾಯಿಗಳ ಅವ್ಯವಹಾರದ ಬಗ್ಗೆ ಸಮಗ್ರ ವಿಚಾರಣೆ ನಡೆಯಲಿದೆ. ಸೆಬಿ ಅಧಿಕಾರಿಗಳು ಮೂರು ದಿನಗಳ ಕಾಲ ರಾಮಲಿಂಗರಾಜು ಹಾಗೂ ಅವರ ಸಹೋದರ ರಾಮರಾಜು ಅವರನ್ನು ವಿಚಾರಣೆ ನಡೆಸಲು ಸುಪ್ರಿಕೋರ್ಟ್ ಅನುಮತಿ ನೀಡಿದೆ.
ಸತ್ಯಂ ಕಂಪನಿಯ ಅವ್ಯವಹಾರಕ್ಕೆ ಸಂಬಂಧಿಸಿದಂತೆ ರಾಮಲಿಂಗರಾಜು ಅವರನ್ನು ತಮ್ಮ ವಶಕ್ಕೆ ನೀಡಬೇಕೆಂದು ಸ್ಥಳೀಯ ಸೆಬಿ ಮನವಿ ಮಾಡಿತ್ತು. ಆದರೆ, ಸ್ಥಳೀಯ ನ್ಯಾಯಾಲಯ ಪ್ರಕರಣ ಸೂಕ್ಷ್ಮವಾಗಿದ್ದರಿಂದ ರಾಜು ವಿಚಾರಣೆಗೆ ಅವಕಾಶ ಮಾಡಿಕೊಟ್ಟಿರಲಿಲ್ಲ. ಇದನ್ನು ಪ್ರಶ್ನಿಸಿದ ಸೆಬಿ ಹೈದರಾಬಾದ್ ಹೈಕೋರ್ಟ್ ಮೊರೆ ಹೋಗಿತ್ತು. ಅಲ್ಲಿ ಕೂಡ ಸೆಬಿ ಅಧಿಕಾರಿಗಳಿಗೆ ನಿರಾಶೆ ಉಂಟಾಯಿತು.
ಅಂತಿಮ ಹೋರಾಟ ಎಂಬಂತೆ ಸುಪ್ರಿಕೋರ್ಟ್ ನಲ್ಲಿ ಪ್ರಕರಣವನ್ನು ದಾಖಲಿಸಿ, ರಾಜು ವಿಚಾರಣೆಗೆ ಅವಕಾಶ ಮಾಡಿಕೊಡಬೇಕು ಎಂದು ಮನವಿ ಮಾಡಿಕೊಂಡಿತ್ತು. ಸೆಬಿ ಮನವಿಯನ್ನು ಪುರಸ್ಕರಿಸಿದ ಸುಪ್ರಿಕೋರ್ಟ್ ನ್ಯಾಯಮೂರ್ತಿ ಡಾ ಕೆ ಜಿ ಬಾಲಕೃಷ್ಣನ್ ಅವರನ್ನು ಒಳಗೊಂಡ ಪೀಠ ರಾಜು ವಿಚಾರಣೆಗೆ ಮಂಗಳವಾರ ಅನುಮತಿ ನೀಡಿತ್ತು.
(ದಟ್ಸ್ ಕನ್ನಡ ವಾರ್ತೆ)
ಹೆಚ್ಚಿನ ಓದಿಗೆ: ರಾಜು ವಿಚಾರಣೆ, ಸೆಬಿ ಅರ್ಜಿ ಪುರಸ್ಕರಿಸಿದ ಕೋರ್ಟ್