ಜೈಲಿಗೆ ಹೋಗದೆ ಜಾಮೀನು ಪಡೆದ ಸಂಪಂಗಿ
ಬೆಂಗಳೂರು, ಫೆ. 3 : ಲಂಚ ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದ ಕೆಜಿಎಫ್ ಶಾಸಕ ವೈ ಸಂಪಂಗಿ ಅವರಿಗೆ ಇಂದು ನಗರದ 24 ನೇ ವಿಶೇಷ ಹೆಚ್ಚುವರಿ ನ್ಯಾಯಾಲಯ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.
ಕ್ರಿಮಿನಲ್ ಮೊಕದ್ದಮೆಗೆ ಸಂಬಂಧಿಸಿದಂತೆ ಕಳೆದ ಜನವರಿ 29 ರಂದು ಶಾಸರ ಭವನದಲ್ಲಿ 5 ಲಕ್ಷ ಲಂಚ ಸ್ವೀಕರಿಸುವ ಸಂದರ್ಭದಲ್ಲಿ ಲಂಚ ಪುರಾಣ ಬೆಳಕಿಗೆ ಬಂದಿತ್ತು. ಫಾರೂಕ್ ಎಂಬುವವರಿಂದ ಶಾಸಕ ವೈ ಸಂಪಂಗಿ ಅವರು 50 ಸಾವಿರ ನಗದು ಹಾಗೂ ಉಳಿದ ನಾಲ್ಕೂವರೆ ಲಕ್ಷ ರುಪಾಯಿಗಳ ಚೆಕ್ ಪಡೆಯುತ್ತಿದ್ದ ಸಂದರ್ಭದಲ್ಲಿ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದರು. ಶಾಸಕ ಸಂಪಂಗಿ ಹಣ ಹಾಗೂ ಚೆಕ್ ಸಮೇತ ಲೋಕಾಯುಕ್ತರ ಬಲೆಗೆ ಸಿಕ್ಕಿಬಿದ್ದಿದ್ದರು.
ಲೋಕಾಯುಕ್ತರು ಪೊಲೀಸರು ಲಂಚ ಪಡೆಯುತ್ತಿದ್ದ ಆರೋಪದಡಿ ಬಂಧಿಸುತ್ತಿದ್ದಂತೆಯೇ ಶಾಸಕ ಸಂಪಂಗಿ ಅವರಿಗೆ ಎದೆ ನೋವು ಕಾಣಿಸಿಕೊಂಡಿದ್ದರಿಂದ ಅವರನ್ನು ನಗರದ ಜಯದೇವ್ ಹೃದ್ರೋಗ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಮೈಕೈ ನೋವು ಎಂದ ಶಾಸಕರನ್ನು ನಿಮ್ಹಾನ್ಸ್ ಗೆ ದಾಖಲಿಸಲಾಗಿತ್ತು. ಶಾಸಕ ಸಂಪಂಗಿ ಅವರಿಗೆ ಯಾವುದೇ ಕಾಯಿಲೆ ಇಲ್ಲ ಎಂದು ವೈದ್ಯರು ಸ್ಪಷ್ಟಪಡಿಸಿದ್ದರು. ಜೈಲಿನಲ್ಲಿರಲು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದ ಶಾಸಕ ಬೇಕಂತಲೇ ಆನಾರೋಗ್ಯದ ಕಾರಣ ನೀಡಿ ಆಸ್ಪತ್ರೆಗೆ ದಾಖಲಾಗಿದ್ದರು ಎನ್ನುವ ಸುದ್ದಿ ದಟ್ಟವಾಗಿದೆ. ಒಟ್ಟಿನಲ್ಲಿ ಇಂದು ಶಾಸಕ ಸಂಪಂಗಿ ಅನುಪಸ್ಥಿತಿಯಲ್ಲಿ ನಗರದ 24 ನೇ ವಿಶೇಷ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.
ಶಾಸಕರ ಈ ವರ್ತನೆಯಿಂದ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದ ಲೋಕಾಯುಕ್ತ ನ್ಯಾಯಾಮೂರ್ತಿ ಸಂತೋಷ ಹೆಗ್ಡೆ ಅವರು ಆರೋಪಿ ಶಾಸಕರ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಬೇಕು ಎಂದು ಹೇಳಿದ್ದರು.
(ದಟ್ಸ್ ಕನ್ನಡ ವಾರ್ತೆ)