ಮುಂದಿನ ಮುಖ್ಯ ಚುನಾವಣಾ ಆಯುಕ್ತ ಚಾವ್ಲಾ?
ನವದೆಹಲಿ, ಫೆ.2: ಚುನಾವಣಾ ಆಯೋಗ ತನ್ನ ವ್ಯಾಪ್ತಿಯಲ್ಲಿ ತಾನಿರಬೇಕೆಂದು, ಅದನ್ನು ಬಿಟ್ಟು ರಾಜಕೀಯ ವ್ಯಕ್ತಿಯಾಗಿ ವರ್ತಿಸುವುದು ಸರಿಯಲ್ಲ ಎಂದು ಕೇಂದ್ರ ಕಾನೂನು ಸಚಿವ ಎಚ್.ಆರ್.ಭಾರದ್ವಾಜ್ ಹೇಳುವ ಮೂಲಕ ಮುಖ್ಯ ಚುನಾವಣಾ ಆಯುಕ್ತ ಗೋಪಾಲಸ್ವಾಮಿ ಅವರ ಮೇಲೆ ತಿರುಗಿಬಿದ್ದಂತಾಗಿದೆ.
ಚುನಾವಣೆ ಆಯೋಗ ಸಂವಿಧಾನದ ಚೌಕಟ್ಟಿನಲ್ಲಿರುವ ಸಂಸ್ಥೆ. ಅದರ ಮೇಲೆ ಅಧಿಕಾರ ಚಲಾಯಿಸುವ ಹಕ್ಕು ರಾಷ್ಟ್ರಪತಿಗಳಿಗೆ ಮಾತ್ರ ಇದೆ. ಚುನಾವಣಾ ಅಧಿಕಾರಿಗಳಲ್ಲಿ ಯಾರೊಬ್ಬರ ವರ್ತನೆ ಮೇಲೆ ಅನುಮಾನ ಬಂದರೂ ಸರಕಾರ ಚುನಾವಣೆ ಸಂಘದ ವರದಿಯನ್ನು ತರಿಸಿಕೊಳ್ಳುತ್ತದೆ.ಅದರ ಪ್ರಕಾರ ರಾಷ್ಟ್ರಪತಿಗಳು ಕ್ರಮ ಕೈಗೊಳ್ಳುತ್ತಾರೆ. ಚುನಾವಣೆ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಿ ಎಂದು ಶಿಫಾರಸು ಮಾಡುವ ಅಧಿಕಾರ ಚುನಾವಣಾ ಆಯೋಗಕ್ಕೆ ಇಲ್ಲ. ಚುನಾವಣಾ ಆಯೋಗದಲ್ಲಿ ಎಲ್ಲರಿಗೂ ಸಮಾನ ಅಧಿಕಾರಇದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಏಪ್ರಿಲ್ 20, 2009ರಂದು ಗೋಪಾಲಸ್ವಾಮಿಯವರು ಚುನಾವಣಾ ಆಯುಕ್ತ ಹುದ್ದೆಯಿಂದ ನಿವೃತ್ತರಾಗಲಿದ್ದು, ಆ ಸ್ಥಾನಕ್ಕೆ ಚಾವ್ಲಾ ಅವರು ಬರಲಿದ್ದಾರೆ ಎಂದು ಭರದ್ವಾಜ್ ತಿಳಿಸಿದರು. ಒಟ್ಟಿನಲ್ಲಿ ಮುಖ್ಯಚುನಾವಣಾ ಆಯುಕ್ತ ಗೋಪಾಲಸ್ವಾಮಿ ಹಾಗೂ ಚುನಾವಣಾ ಆಯುಕ್ತ ನವೀನ್ ಚಾವ್ಲಾ ನಡುವೆ ನಡೆಯುತ್ತಿರುವ ಸಮರದಲ್ಲಿ ಸಚಿವರು ಚಾವ್ಲಾ ಅವರಿಗೆ ಬೆಂಬಲ ನೀಡಿದಂತಾಗಿದೆ.
(ಏಜೆನ್ಸೀಸ್)
ಚುನಾವಣೆ
ಆಯೋಗದಲ್ಲಿ
ಭುಗಿಲೆದ್ದ
ಭಿನ್ನಮತ