ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಜೆಪಿಗೆ ಜನತೆಯಿಂದ ತಕ್ಕ ಪಾಠ : ಮುತಾಲಿಕ್

By Staff
|
Google Oneindia Kannada News

ಮಡಿಕೇರಿ, ಫೆ. 1: ಹಿಂದುತ್ವದ ಆಧಾರದ ಮೇಲೆ ಅಧಿಕಾರಕ್ಕೆ ಬಂದ ಬಿಜೆಪಿ ಪಕ್ಷ, ಈಗ ಮಿತಿ ಮೀರಿ ವರ್ತಿಸುತ್ತಿದೆ. ಹಿಂದೂ ಸಂಘಟನೆಗಳ ಮೇಲೆ ಪ್ರಹಾರ ಮಾಡುತ್ತಿದೆ. ಇದಕ್ಕೆ ತಕ್ಕ ಉತ್ತರ ದೊರೆಯಲಿದೆ ಎಂದು ಶ್ರೀರಾಮ ಸೇನೆ ಮುಖಂಡ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.

ಮಡಿಕೇರಿಯಲ್ಲಿ ಬಂಧನದಲ್ಲಿರುವ ಮುತಾಲಿಕ್ ಟಿವಿ 9 ವಾರ್ತಾ ವಾಹಿನಿಯೊಂದಿಗೆ ಮಾತನಾಡುತ್ತಾ, ಮುಂಬರುವ ದಿನಗಳಲ್ಲಿ ಬಿಜೆಪಿ ಪಕ್ಷಕ್ಕೆ ಜನತೆ ತಕ್ಕ ಪಾಠ ಕಲಿಸಲಿದ್ದಾರೆ. ಪಬ್ ದಾಳಿಯನ್ನು ವಿನಾಕಾರಣ ರಾಜಕೀಯ ಪಕ್ಷಗಳು ಎಳೆದಾಡುತ್ತಿವೆ. ಮಹಿಳಾ ಆಯೋಗದ ಸದಸ್ಯರು ಇತ್ತೀಚೆಗೆ ಘಟನಾ ಸ್ಥಳಕ್ಕೆ ಭೇಟಿ ಕೊಟ್ಟು ಪಬ್ ಮಾಲೀಕರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ನಮಗೆ ಅಷ್ಟು ಸಾಕು, ಕುಡಿತ, ಮೋಜು, ಮಹಿಳೆಯನ್ನು ಕೀಳಾಗಿ ಚಿತ್ರಿಸುವ ಸಮಾಜ ಘಾತುಕರ ವಿರುದ್ಧ ನಮ್ಮ ಹೋರಾಟ ಅವಿರತವಾಗಿ ಸಾಗಲಿದೆ ಎಂದರು.

ಆದರೆ, ಮಂಗಳೂರಿನ ಅಮ್ನೇಷಿಯಾ ಪಬ್ ಮೇಲೆ ನಿಮ್ಮ ಸಂಘಟನೆಯ ಕಾರ್ಯಕರ್ತರು ಮಹಿಳೆಯರ ಮೇಲೆ ಮಾಡಿದ ಹಲ್ಲೆಯನ್ನು ಹೇಗೆ ಸಮರ್ಥಿಸಿಕೊಳ್ಳುತ್ತಿರಾ ಎಂಬ ಪ್ರಶ್ನೆಗೆ ಖಾರವಾಗಿ ಪ್ರತಿಕ್ರಿಯಿಸಿದ ಮುತಾಲಿಕ್, ನಾನು ಎಂದೂ ಮಹಿಳೆಯರ ಮೇಲಿನ ಹಲ್ಲೆಯನ್ನು ಸಮರ್ಥಿಸಿಕೊಂಡಿಲ್ಲ. ಪಬ್ ಸಂಸ್ಕೃತಿಯ ಮೇಲಿನ ಪ್ರತಿಭಟನೆಯನ್ನು ಸಮರ್ಥಿಸಿಕೊಂಡಿದ್ದೇನೆ . ಒಂದು ವಿಷ್ಯ ನಿಮ್ಮ ಮಾಧ್ಯಮದವರಿಗೆ ಸ್ಪಷ್ಟಪಡಿಸಲು ಇಷ್ಟಪಡುತ್ತೇನೆ.

"ನಮ್ಮ ಕಾರ್ಯಕರ್ತರು ಅಂದು ಮಾಡಿದ ದಾಳಿಗೆ ನಾನು ಕ್ಷಮೆ ಕೋರಿದ್ದೇನೆ. ಆದರೆ, ಮಹಿಳೆಯರು ಕುಡಿತ, ಮೋಜಿನ ಹೆಸರಿನಲ್ಲಿ ಪಬ್ ಸಂಸ್ಕೃತಿ ಬೆಳೆಸುವುದು ಎಷ್ಟು ಸರಿ. ಈ ಬಗ್ಗೆ ಯಾಕೆ ನೀವ್ಯಾರು ಬೆಳಕು ಚೆಲ್ಲುತ್ತಿಲ್ಲ"ಎಂದು ಗುಡುಗಿದರು.

ಬಿಜೆಪಿ ಸರ್ಕಾರ ಹಿಂದೂತ್ವವನ್ನು ಮರೆತಿದ್ದರೆ ಅದಕ್ಕೆ ಪ್ರತಿಫಲವನ್ನು ಅನುಭವಿಸಲಿದ್ದಾರೆ, ನಮ್ಮ ಹಿಂದೆ 10 ಕೋಟಿ ಬೆಂಬಲಿಗರಿದ್ದಾರೆ. ಹೆಮ್ಮೆ ಪಡುವಂಥ ಸಂಸ್ಕೃತಿಯಿದೆ ನಾವು ಯಾವುದಕ್ಕೂ ಹೆದರಬೇಕಾಗಿಲ್ಲ ಎಂದು ಮಾತು ಮುಕ್ತಾಯಗೊಳಿಸಿದರು. ಮುತಾಲಿಕ್ ಅವರ ವಿರುದ್ಧ ಸುಮಾರು 57ಕ್ಕೂ ಹೆಚ್ಚು ಕ್ರಿಮಿನಲ್ ಪ್ರಕರಣಗಳು ದೇಶದಾದ್ಯಂತ ದಾಖಲಾಗಿವೆ.

(ದಟ್ಸ್ ಕನ್ನಡವಾರ್ತೆ)
ಎಟಿಎಸ್ ಪೊಲೀಸರಿಂದ ಮುತಾಲಿಕ್ ವಿಚಾರಣೆ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X