ಜ.29ರಂದು ಮುತಾಲಿಕ್ ಕೋರ್ಟ್ ಗೆ ಹಾಜರು
ಮಂಗಳೂರು, ಜ.29: ಪ್ರಚೋದನಕಾರಿ ಕರಪತ್ರಕ್ಕೆ ಸಂಬಂಧಿಸಿದಂತೆ ಬಂಧಿತರಾಗಿದ್ದ ಶ್ರೀರಾಮಸೇನೆ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಅವರಿಗೆ ದಾವಣಗೆರೆ ಹಿರಿಯ ನ್ಯಾಯಾಲಯ ಬುಧವಾರ(ಜ.28) ಜಾಮೀನು ನೀಡಿತ್ತ್ತು. ಆದರೆ ಅವರು ಜಾಮೀನು ಪಡೆದ ಸ್ವಲ್ಪ ಹೊತ್ತಿನಲ್ಲೇ ಮಂಗಳೂರು ಪಬ್ ದಾಳಿಗೆ ಸಂಬಂಧಿಸಿದಂತೆ ಅವರನ್ನು ಮತ್ತೆ ಬಂಧಿಸಲಾಯಿತು. ಗುರುವಾರ ಮುತಾಲಿಕ್ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುತ್ತದೆ.
ಮಂಗಳೂರು ಉತ್ತರ ಬಂದರು ಠಾಣೆ ಪೊಲೀಸರು ಬಾಡಿ ವಾರಂಟ್ ತಂದು ಬೆಳಗ್ಗೆಯಿಂದಲೇ ಕಾದು ಕುಳಿತಿದ್ದರು. ಉಪ ಬಂದೀಖಾನೆಗೆ ವಾರಂಟ್ ಪ್ರತಿ ಸಲ್ಲಿಸಿ, ಮುತಾಲಿಕ್ ರನ್ನು ವಶಕ್ಕೆ ತೆಗೆದುಕೊಳ್ಳುವ ಹೊತ್ತಿಗೆ ರಾತ್ರಿಯಾಯಿತು. ಹಾಗಾಗಿ ಗುರುವಾರ ಬೆಳಗ್ಗೆ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುತ್ತದೆ.
ಮುತಾಲಿಕ್ ಬಂಧನ ಖಂಡಿಸಿ ಹುಬ್ಬಳ್ಳಿ-ಧಾರವಾಡ, ಹಾವೇರಿ, ಗದಗ, ಬೆಳಗಾವಿ, ಬೀದರ್ ಸೇರಿದಂತೆ ರಾಜ್ಯದ ನಾನಾ ಕಡೆ ಪ್ರತಿಭಟನೆಗಳು ನಡೆದವು. ಹುಕ್ಕೇರಿಯಲ್ಲಿ ಬಂದ್ ಆಚರಿಸಲಾಯಿತು. ಮುತಾಲಿಕ್ ರನ್ನು ಬಂಧಿಸಿರುವುದು ಖಂಡನೀಯ. ಕೂಡಲೇ ಅವರನ್ನು ಬಿಡುಗಡೆ ಮಾಡಬೇಕು. ಇಲ್ಲದಿದ್ದರೆ ಮುಂದಾಗುವ ಅನಾಹುತಕ್ಕೆ ಸರಕಾರವೇ ನೇರ ಹೊಣೆ ಎಂದು ಶ್ರೀರಾಮಸೇನಾ ಕಾರ್ಯಕರ್ತರು ಎಚ್ಚರಿಕೆ ನೀಡಿದರು.
(ದಟ್ಸ್ ಕನ್ನಡ ವಾರ್ತೆ)