ಕನ್ನಡ ನೆಲದಲ್ಲಿ ಕನ್ನಡ ಧ್ವಜ ಹಾರಿಸುವುದು ತಪ್ಪೆ?
ಬೆಂಗಳೂರು, ಜ. 29 : ಕನ್ನಡ ನೆಲದಲ್ಲಿ ಕನ್ನಡಿಗರು ಕನ್ನಡ ಧ್ವಜ ಹಾರಿಸುವುದು ತಪ್ಪೆ? ತಪ್ಪು ಅನ್ನುವುದಾದರೆ ಅಂಥ 'ತಪ್ಪು' ಮಾಡಿದ ಗಾರ್ಮೆಂಟ್ ಕಂಪನಿಯ 8 ಜನ ನೌಕರರನ್ನು ಕೆಲಸದಿಂದ ವಜಾ ಮಾಡಿದ ಘಟನೆ ನಗರದ ಹೊಸೂರ್ ರಸ್ತೆಯಲ್ಲಿ ಇಂದು ನಡೆದಿದೆ.
ಹೊಸೂರು ರಸ್ತೆಯಲ್ಲಿರುವ ಕೆ. ಮೋಹನ್ ಅಂಡ್ ಕಂಪನಿ ಎಂಬ ಗಾರ್ಮೆಂಟ್ ರಫ್ತು ಕಂಪನಿ ಬಡ ಕಾರ್ಮಿಕರನ್ನು ವಜಾ ಮಾಡಿದ್ದಲ್ಲದೆ ಕಚೇರಿಯ ಮೇಲೆ ಹಾರಿಸಲಾಗಿದ್ದ ಕನ್ನಡ ಧ್ವಜವನ್ನು ಹರಿದು ಕಸದ ತೊಟ್ಟಿಗೆ ಬಿಸಾಡಿದೆ. ಆಡಳಿತ ವರ್ಗದ ಈ ಪುಂಡಾಟಿಕೆಯಿಂದ ರೊಚ್ಚಿಗೆದ್ದಿರುವ ಎರಡೂವರೆ ಸಾವಿರ ಕಾರ್ಮಿಕರು ಕನ್ನಡ ಧ್ವಜಕ್ಕೆ ಅವಮಾನ ಮಾಡಿರುವವರ ವಿರುದ್ಧ ಸಿಡಿದೆದ್ದಿದ್ದಾರೆ.
ವಜಾಗೊಂಡಿರುವ ಕಾರ್ಮಿಕರನ್ನು ಮತ್ತೆ ಕೆಲಸಕ್ಕೆ ತೆಗೆದುಕೊಳ್ಳಬೇಕು, ಇನ್ನು ಮುಂದೆ ಪ್ರತಿ ವರ್ಷವೂ ಕನ್ನಡ ಧ್ವಜ ಹಾರಿಸಲು ಅವಕಾಶ ಮಾಡಿಕೊಡಬೇಕು ಮತ್ತು ಕನ್ನಡಕ್ಕೆ ಅವಮಾನ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಇಂದು ಧರಣಿ ಕೂತಿದ್ದರು. ಕ್ರಮ ಕೈಗೊಳ್ಳುವವರೆಗೆ ಕೆಲಸಕ್ಕೆ ಹಾಜರಾಗುವುದಿಲ್ಲ ಎಂದು ಸಾವಿರಾರು ಕಾರ್ಮಿಕರು ಧ್ವನಿ ಎತ್ತಿದ್ದಾರೆ.
ಘಟನೆಯ ವಿವರ : ಹಲವಾರು ವರ್ಷಗಳಿಂದ ಕನ್ನಡ ನಾಡಿನಲ್ಲಿ ಬೀಡುಬಿಟ್ಟಿರುವ ಕೆ ಮೋಹನ್ ಅಂಡ್ ಕಂಪನಿ ರಾಜ್ಯೋತ್ಸವದಂದು ಧ್ವಜ ಹಾರಿಸಲು ಅನುವು ಮಾಡಿಕೊಡುತ್ತಿದ್ದರೂ ಈ ಬಾರಿ ವಿರೋಧ ವ್ಯಕ್ತಪಡಿಸಿತ್ತು. ಕಂಪನಿಯಲ್ಲಿ ಪಕ್ಕದ ರಾಜ್ಯದ ಅಧಿಕಾರಿಗಳು ಬಂದು ಸೇರಿಕೊಂಡಿದ್ದರಿಂದ ಕನ್ನಡ ಧ್ವಜ ಹಾರಿಸಲು ವಿರೋಧ ವ್ಯಕ್ತವಾಗಿದೆ ಎನ್ನಲಾಗಿದೆ.
ಹಾರಿಸಿದ ಕನ್ನಡ ಧ್ವಜ ಕಿತ್ತು ಹಾಕಲಾಗಿದೆ. ಮತ್ತೆ ಹಾರಿಸಬಾರದೆಂದು ಅಪ್ಪಣೆಯನ್ನೂ ಕೊಡಲಾಗಿದೆ. ಅವರ ಕಟ್ಟಳೆ ಮೀರಿಯೂ ಕೆಲ ಕನ್ನಡ ಪ್ರೇಮಿಗಳು ಬಲವಂತವಾಗಿ ಕನ್ನಡ ಧ್ವಜ ಹಾರಿಸಿದ್ದಾರೆ. ಇದರಿಂದ ಕುಪಿತರಾಗಿರುವ ಅಧಿಕಾರಿಗಳು ಧ್ವಜ ಹಾರಿಸಿದವನನ್ನು, ಅದನ್ನು ಬೆಂಬಲಿಸಿದವರನ್ನು ಕೆಲಸದಿಂದ ವಜಾ ಮಾಡಿದೆ. ಇದಲ್ಲದೆ ಕನ್ನಡ ಧ್ವಜವನ್ನು ಮತ್ತೆ ಕಿತ್ತು ಹರಿದು ಕಸದ ತೊಟ್ಟಿಗೆ ಎಸೆಯಲಾಗಿದೆ.
ಈಗ ಕನ್ನಡೇತರರ ಕನ್ನಡ ವಿರೋಧಿ ಕೃತ್ಯವನ್ನು ಖಂಡಿಸಿ ಎರಡೂವರೆ ಸಾವಿರ ನೌಕರರು ದಂಗೆಎದ್ದಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)