ಚಿತ್ರದುರ್ಗ,ಸಾಹಿತ್ಯ ಸಮ್ಮೇಳನ ಫೆ.4ಕ್ಕೆ ಮುಂದೂಡಿಕೆ
ಚಿತ್ರದುರ್ಗ, ಜ. 28 : ಅಭಿಲ ಭಾರತ 75ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಫೆ. 4ಕ್ಕೆ ಮುಂದೂಡಲಾಗಿದೆ. ಮಾಜಿ ರಾಷ್ಟ್ರಪತಿ ಆರ್.ವೆಂಕಟರಾಮನ್ ಅವರ ನಿಧನದ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ಜನವರಿ 29 ರಿಂದ ಫೆಬ್ರವರಿ 1ರವರೆಗೆ ಸಾಹಿತ್ಯ ಸಮ್ಮೇಳನ ನಡೆಯಬೇಕಿತ್ತು. ಇದಕ್ಕಾಗಿ ಎಲ್ಲ ಸಿದ್ಧತೆಗಳು ಮುಗಿದಿದ್ದವು. ಆದರೆ, ಮಾಜಿ ರಾಷ್ಟ್ರಪತಿ ವೆಂಕಟರಾಮನ್ ಅವರ ನಿಧನದ ಹಿನ್ನೆಲೆಯಲ್ಲಿ ಸರ್ಕಾರ ಏಳು ದಿನಗಳ ಕಾಲ ಶೋಕಾಚರಣೆ ಘೋಷಿಸಿದ್ದರಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ. ಇದೀಗ ಸಮ್ಮೇಳನ ಫೆ .4, 5, 6 ಮತ್ತು 7 ರಂದು ನಡೆಯಲಿದೆ. ಗೋಷ್ಠಿ ಮತ್ತಿತರ ಕಾರ್ಯಕ್ರಮಗಳಲ್ಲಿ ಯಾವುದೇ ಬದಲಾವಣೆಗಳಿಲ್ಲ ಎಂದು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಆರ್ .ಕೆ. ನಲ್ಲೂರು ಪ್ರಸಾದ್ ತಿಳಿಸಿದ್ದಾರೆ.
ಬೀದರ್ ಉತ್ಸವ ಮುಂದಕ್ಕೆ: ಮಂಗಳವಾರ(ಜ.27) ಆರಂಭಗೊಂಡ ಬೀದರ್ ಉತ್ಸವವನ್ನೂ ಮುಂದೂಡಲಾಗಿದೆ. ಇಲ್ಲಿನ ಕೋಟೆ ಆವರಣದಲ್ಲಿ ಉತ್ಸವ ಅದ್ದೂರಿಯಾಗಿ ಆರಂಭವಾಗಿತ್ತು. ಉದ್ಘಾಟನಾ ಸಮಾರಂಭ ಮುಗಿಯುತ್ತಲೇ ಉತ್ಸವ ಮುಂದೂಡಿಕೆ ಘೋಷಿಸಲಾಯಿತು. ಸಾಂಸ್ಕೃತಿಕ ವೈಭವದ ಸವಿಯಲ್ಲಿ ಸೇರಿದ್ದ ಅಪಾರ ಜನಸ್ತೋಮ ನಿರಾಶೆಯಿಂದ ವಾಪಸಾದರು.
(ದಟ್ಸ್ ಕನ್ನಡ ವಾರ್ತೆ)