ಸತ್ಯಂ ರಾಜು ಜಾಮೀನು ಅರ್ಜಿ ಮತ್ತೆ ಮುಂದೂಡಿಕೆ
ಹೈದರಾಬಾದ್, ಜ. 23 : ಸತ್ಯಂ ಕಂಪನಿಯ ಮಾಜಿ ಚೇರಮನ್ ರಾಮಲಿಂಗರಾಜು ಅವರನ್ನು ಸೇಬಿ (SEBI) ವಶಕ್ಕೆ ನೀಡಲು ನ್ಯಾಯಾಲಯ ಸ್ಪಷ್ಟವಾಗಿ ನಿರಾಕರಿಸಿದೆ. ಹಾಗೂ ರಾಜು ಸಹೋದರರ ಜಾಮೀನು ಅರ್ಜಿಯನ್ನು ಜನವರಿ 27 ರವರಿಗೆ ಮುಂದೂಡಿದೆ.
ಸತ್ಯಂ ಹಗರಣ ಗಂಭೀರ ಸ್ವರೂಪದ ಪ್ರಕರಣವಾಗಿದೆ. ಈ ಹಿನ್ನಲೆಯಲ್ಲಿ ಇಂತಹ ಪ್ರಕರಣದಲ್ಲಿ ಮೂರನೇ ವ್ಯಕ್ತಿಗಳು ಭಾಗಿಯಾಗುವುದು ಸರಿಯಲ್ಲ ಎಂದು ಆಭಿಪ್ರಾಯಪಟ್ಟಿರುವ ಇಲ್ಲಿನ ಆರನೇ ಹೆಚ್ಚುವರಿ ನ್ಯಾಯಾಲಯ ಸೇಬಿ ಸಲ್ಲಿಸಿದ್ದ ಅರ್ಜಿಯನ್ನು ಸ್ಪಷ್ಟವಾಗಿ ನಿರಾಕರಿಸಿದೆ. ಸೇಬಿ ಒಂದು ದಿನ ಹಾಗೂ ಗಂಭೀರ ಸ್ವರೂಪದ ಪ್ರಕರಣಗಳ ತನಿಖಾ ಸಂಸ್ಥೆ (ಎಸ್ ಎಫ್ಐಓ) ಆರು ದಿನಗಳ ಮಟ್ಟಿಗೆ ರಾಮಲಿಂಗರಾಜು ಮತ್ತು ಅವರ ಸಹೋದರ ರಾಮರಾಜು ಅವರನ್ನು ನಮ್ಮ ವಶಕ್ಕೆ ನೀಡಬೇಕು ಎಂದು ಅರ್ಜಿ ಸಲ್ಲಿಸಿತ್ತು.
ಸತ್ಯಂ ಮಾಜಿ ಚೇರಮನ್ ರಾಮಲಿಂಗರಾಜು, ಹಾಗೂ ಹಣಕಾಸು ವಿಭಾಗದ ಮುಖ್ಯಸ್ಥ ಶ್ರೀನಿವಾಸ ವದ್ಲಾಮಣಿ ಅವರನ್ನು ಜನವರಿ 31ರ ವರಿಗೆ ನ್ಯಾಯಾಂಗ ಬಂಧನದಲ್ಲಿ ಇರಿಸಲು ನ್ಯಾಯಾಲಯ ಆದೇಶಿಸಿದೆ. ರಾಜು ಜಾಮೀನು ಅರ್ಜಿಯನ್ನು ಜನವರಿ 27 ರಂದು ವಿಚಾರಣೆ ನಡೆಸುವುದಾಗಿ ಹೇಳಿದೆ.
(ದಟ್ಸ್ ಕನ್ನಡ ವಾರ್ತೆ)