ಅಕ್ರಮ ಗಣಿಗಾರಿಕೆ ಸ್ಪಷ್ಟನೆಗೆ ಪ್ರತಿಪಕ್ಷಗಳ ಆಗ್ರಹ
ಬೆಳಗಾವಿ, ಜ. 21 : ನಗರದಲ್ಲಿ ನಡೆಯುತ್ತಿರುವ ಅಧಿವೇಶನದ ಆರನೇ ದಿನದ ಕಲಾಪ ಆರಂಭವಾಗುತ್ತಿದ್ದಂತೆಯೇ ಆಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಹಾಗೂ ಜೆಡಿಎಸ್ ಮುಖಂಡರು ಸರ್ಕಾರದ ಮೇಲೆ ಮತ್ತೆ ಮುಗಿಬಿದ್ದರು. ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದ ಪ್ರಕರಣವನ್ನು ಕೂಡಲೇ ಸಿಬಿಐ ತನಿಖೆಗೆ ವಹಿಸಬೇಕೆಂದು ಉಭಯ ಸದನದಲ್ಲಿ ಪ್ರತಿಪಕ್ಷಗಳಿಂದ ಒಕ್ಕೊರಲಿನ ಒತ್ತಾಯ ಕೇಳಿಬಂದಿತು. ಹಾಗೂ ಈ ಹಗರಣಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ಕೂಡಲೇ ಸ್ಪಷ್ಟ ಉತ್ತರ ನೀಡಬೇಕು ಎಂದು ಪಟ್ಟುಹಿಡಿದರು. ಇದರಿಂದ ಕಾಂಗ್ರೆಸ್, ಜೆಡಿಎಸ್ ಮತ್ತು ಬಿಜೆಪಿ ಶಾಸಕರ ನಡುವೆ ಮಾತಿನ ಚಕಮಕಿ, ವಾಗ್ವಾದ ನಡೆದಿದ್ದರಿಂದ ಸದನದಲ್ಲಿ ಕೋಲಾಹಲ ಉಂಟಾಯಿತು.
ಪ್ರತಿಪಕ್ಷಗಳ ಒತ್ತಡಕ್ಕೆ ಮಣಿದ ಯಡಿಯೂರಪ್ಪ ಅಕ್ರಮ ಗಣಿಗಾರಿಕೆ ಸಂಬಂಧಿಸಿದಂತೆ ಸೂಕ್ತ ಕ್ರಮಕೈಗೊಳ್ಳಲು ಹಿಂದೇಟು ಹಾಕುವುದಿಲ್ಲ ಎಂದು ಪ್ರತಿಯಾಗಿ ಉತ್ತರ ನೀಡಿದರು. ಲೋಕಾಯುಕ್ತರು ನೀಡಿರುವ ಅಕ್ರಮ ಗಣಿಗಾರಿಕೆ ಪ್ರಕರಣವನ್ನು ಶೀಘ್ರವಾಗಿ ಸಮಗ್ರ ತನಿಖೆ ನಡೆಸುವಂತೆ ವಿರೋಧಿ ಪಕ್ಷಗಳು ಒತ್ತಾಯಿಸುತ್ತಿರುವುದು ಸರಿ. ಇದಕ್ಕೆ ಸಂಬಂಧಿಸಿದಂತೆ ಕೂಡಲೇ ಜಂಟಿ ಸದನ ಸಮಿತಿಯೊಂದನ್ನು ರಚಿಸುತ್ತೇವೆ ಎಂದು ಉತ್ತರಿಸಿದರು. ಆದರೆ, ಪ್ರತಿಪಕ್ಷಗಳು ಅದರಲ್ಲೂ ಮುಖ್ಯವಾಗಿ ಕಾಂಗ್ರೆಸ್ ಪಕ್ಷ ಇನ್ನೊಂದು ಸಾರಿ ತನ್ನ ಒತ್ತಾಯವನ್ನು ಪುನರ್ ಪುರಿಶೀಲನೆ ಮಾಡಿಕೊಳ್ಳಬೇಕು ಎಂದು ಯಡಿಯೂರಪ್ಪ ಸ್ಪಷ್ಟಪಡಿಸಿದರು.
ಧರ್ಮಸಿಂಗ್ ಮುಖ್ಯಮಂತ್ರಿ ಆಗಿದ್ದಾಗ ಪ್ರಸ್ತುತ ಕೆಪಿಸಿಸಿ ಅಧ್ಯಕ್ಷ ಆರ್ ವಿ ದೇಶಪಾಂಡೆ ಪುತ್ರನಿಗೆ ಸಂಬಂಧಿಸಿದ ನೂರಾರು ಎಕರೆ ಪ್ರದೇಶದಲ್ಲಿ ಗಣಿಗಾರಿಕೆ ನಡೆಸಲು ಕೇಂದ್ರ ಶಿಫಾರಸ್ಸು ಮಾಡಲಾಗಿತ್ತು. ನಂತರ ಬಂದ ಕುಮಾರಸ್ವಾಮಿ ಸರ್ಕಾರದಲ್ಲಿ ಅನೇಕ ಅಕ್ರಮ ಗಣಿಗಾರಿಕೆ ಪರವಾನಿಗೆಯನ್ನು ಪುನರ್ ನವೀಕರಣ ಮಾಡಲಾಗಿದೆ. ರಾಜ್ಯಪಾಲರ ಆಡಳಿತದಲ್ಲಿಯೂ ಅನೇಕ ಲೋಪದೋಷಗಳಾಗಿವೆ ಎಂದು ಮುಖ್ಯಮಂತ್ರಿ ಹೇಳುತ್ತಿದ್ದಂತೆಯೇ ಕಾಂಗ್ರೆಸ್ ವಲಯದಿಂದ ತೀವ್ರ ಆಕ್ಷೇಪ ಹಾಗೂ ಆಕ್ರೋಶ ವ್ಯಕ್ತವಾಯಿತು.
ಪ್ರತಿಪಕ್ಷಗಳಿಗೆ ಸಂಬಂಧಿಸಿದ ವ್ಯಕ್ತಿಗಳ ಬಗ್ಗೆ ಮಾತ್ರ ಮುಖ್ಯಮಂತ್ರಿ ಹೇಳುತ್ತಿರುವುದು ಏಕೆ, ಲೋಕಾಯುಕ್ತರು ನೀಡಿರುವ 109 ಮಂದಿಯ ಹೆರಸನ್ನು ಹೇಳಿ ಎಂದು ಯಡಿಯೂರಪ್ಪ ಅವರನ್ನು ಕಾಂಗ್ರೆಸ್ಸಿಗರು ಆಗ್ರಹಿಸಿದರು. ಜೆಡಿಎಸ್ ಕೂಡ ಇದೇ ರಾಗ ಹಾಡಿತು. ಇದರಿಂದ ಸದನದಲ್ಲಿ ಗದ್ದಲ, ಗೌಜು ಉಂಟಾಯಿತು.
(ದಟ್ಸ್
ಕನ್ನಡ
ವಾರ್ತೆ)
ಗಣಿ
ಗದ್ದಲ
ಸದನದಲ್ಲಿ
ಕೋಲಾಹಲ
ರೆಡ್ಡಿಯನ್ನು
ಸಂಪುಟದಿಂದ
ಕೈಬಿಡಿ