ಸತ್ಯಂ ಗೆ ಸರ್ಕಾರದ 50 ಎಕರೆ ಜಮೀನು
ಹೈದರಾಬಾದ್, ಜ. 20 : ಆಂಧ್ರಪ್ರದೇಶದ ಕಾಂಗ್ರೆಸ್ ಸರಕಾರ ಸತ್ಯಂ ಸಂಸ್ಥೆಗೆ ವಿಶಾಖಪಟ್ಟಣಂನಲ್ಲಿ ವಿಶೇಷ ಆರ್ಥಿಕ ವಲಯ ಸ್ಥಾಪನೆಯ (SEZ) ಅಡಿಯಲ್ಲಿ 50 ಎಕರೆ ಜಾಗವನ್ನು ಮುಖ್ಯಮಂತ್ರಿ ರಾಜಶೇಖರ ರೆಡ್ಡಿ ಅವರ ಆದೇಶದ ಮೇರೆಗೆ ಸರಕಾರ ಮಂಜೂರು ಮಾಡಿರುವ ವಿಷಯ ಬಹಿರಂಗಗೊಂಡಿದೆ. ಸತ್ಯಂ ಹಗರಣ ಬಯಲುಗೊಂಡ ಸ್ವಲ್ಪ ದಿನದ ಹಿಂದೆಯಷ್ಟೆ ಸರಕಾರಿ ಆದೇಶ ಹೊರಬಿದ್ದಿರುವುದು ಅನೇಕ ಸಂಶಯಗಳಿಗೆ ಕಾರಣವಾಗಿದೆ.
ರಾಮಲಿಂಗ ರಾಜು ಹಗರಣದಲ್ಲಿ ಈವರೆಗೂ ಹಿಂದಿನ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರ ಕಡೆ ಬೆರಳು ತೋರಿಸುತ್ತಿದ್ದ ಹಾಲಿ ಮುಖ್ಯಮಂತ್ರಿ ಇದರಿಂದ ಭಾರಿ ಮುಜುಗರಕ್ಕೆ ಒಳಗಾಗಿದ್ದಾರೆ. ನಿನ್ನೆಯಷ್ಟೆ ನವದೆಹಲಿಯಲ್ಲಿ ಸೋನಿಯಾ ಗಾಂಧಿ ಅವರನ್ನು ಸತ್ಯಂ ಹಗರಣದ ಕುರಿತು ಭೇಟಿಯಾದ ನಂತರ ರೆಡ್ಡಿ, ತನ್ನ ಸರಕಾರ ರಾಮಲಿಂಗಾ ರಾಜು ಅವರಿಗೆ ಯಾವ ರೀತಿಯಲ್ಲೂ ಸಹಾಯ ನೀಡಿರುವ ಸಾಧ್ಯತೆಯೇ ಇಲ್ಲ ಎಂದು ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಿದ್ದರು.
ಕೋಟ್ಯಾಂತರ ರುಪಾಯಿ ಬೆಲೆಬಾಳುವ ಭೂಮಿ ಖರೀದಿ ಪ್ರಕ್ರಿಯೆಯಲ್ಲಿ ಮೇತಾಸ್ ಸಂಸ್ಥೆಗೆ ಯಾವ ರೀತಿಯಲ್ಲೂ ಸಹಾಯ ಮಾಡಿಲ್ಲ ಈ ಸಂಭಂದದ ಹರಾಜು ಪ್ರಕ್ರಿಯೆಯಲ್ಲಿ ಪೂರ್ಣ ಪ್ರಮಾಣದ ಪಾರದರ್ಶಕತೆ ಕಾಪಾಡಿಕೊಂಡು ಬಂದಿದ್ದೇನೆ ಎಂದು ರೆಡ್ಡಿ ಹೇಳಿದ್ದಾರೆ.
(ದಟ್ಸ್
ಕನ್ನಡ
ವಾರ್ತೆ)