ಲಾತೂರ್ ನಲ್ಲಿ ರಾಜ್ಯದ ಬಸ್ ಗೆ ಬೆಂಕಿ
ಬೀದರ್, ಜ. 19 : ಮಹಾರಾಷ್ಟ್ರ ವಿಧಾನಸಭೆ ಪ್ರತಿಪಕ್ಷದ ನಾಯಕ ರಾಮದಾಸ್ ಕದಂ ಕನ್ನಡಿಗರ ವಿರುದ್ಧ ಗುಡುಗಿದ ಬೆನ್ನಲ್ಲೇ ಮರಾಠಿಗರು ಅವರ ನೆಲದಲ್ಲಿರುವ ಕನ್ನಡಿಗರ ಮೇಲೆ ದೌರ್ಜನ್ಯ ನಡೆಸುತ್ತಿರುವ ಘಟನೆ ವರದಿಯಾಗತೊಡಗಿವೆ. ಇದಕ್ಕೆ ಸ್ಪಷ್ಟ ನಿದರ್ಶನವೆಂದರೆ, ರಾಜ್ಯ ರಸ್ತೆ ಸಾರಿಗೆ ಬಸ್ಸಿಗೆ ಲಾತೂರಿನಲ್ಲಿ ಬೆಂಕಿ ಹಚ್ಚಲಾಗಿದೆ. ಹಾಗೂ ಇತರೆ ಎರಡು ಕಡೆಗಳಲ್ಲಿ ಬಸ್ ಗಳಿಗೆ ಕಲ್ಲು ತೂರಾಟ ನಡೆಸಿರುವ ಘಟನೆಗಳು ಭಾನುವಾರ ನಡೆದಿವೆ.
ಬಸ್ಸಿನಲ್ಲಿದ್ದ 25ಕ್ಕೂ ಹೆಚ್ಚು ಮಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಚಾಲಕನ ಮೇಲೆ ತೀವ್ರ ಹಲ್ಲೆ ನಡೆಸಲಾಗಿದ್ದು. ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಹುಮನಾಬಾದ್ ಘಟಕಕ್ಕೆ ಸೇರಿದ ಬಸ್ (ಸಂಖ್ಯೆ ಕೆಎ 38, ಎಫ್ 392) ಲಾತೂರ್ ಗೆ ಹೊರಟಿದ್ದ ಸಂದರ್ಭದಲ್ಲಿ ಉದ್ರಿಕ್ತರು ಹಚ್ಚಿದ ಬೆಂಕಿಗೆ ಆಹುತಿಯಾಗಿದೆ. ಲಾತೂರಿನಿಂದ 10 ಕಿಮೀ ದೂರದ ನೆಹರು ನಗರ ಪ್ರವೇಶಿಸುತ್ತಿದ್ದಂತೆಯೇ 20ಕ್ಕೂ ಹೆಚ್ಚು ಜನರ ಗುಂಪೊಂದು ಬಸ್ಸಿನ ಮೇಲೆ ಕಲ್ಲು ತೂರಾಟ ಆರಂಭಿಸಿತು. ನಂತರ ಪ್ರಯಾಣಿಕರನ್ನು ಕೆಳಗಿಳಿಸಿ ಬೆಂಕಿ ಹಚ್ಚಿ ಪರಾರಿಯಾದರು. ಬಸ್ ಚಾಲಕ ಧೂಳಪ್ಪ ಅವರಿಗೆ ಪೆಟ್ಟಾಗಿದ್ದು ಲಾತೂರ್ ಆಸ್ಪತ್ರೆಗೆ ಸೇರಿಸಲಾಗಿದೆ. ಬಸ್ ಬಹುತೇಕವಾಗಿ ಸುಟ್ಟು ಕರಕಲಾಗಿದೆ.
ಬೆಳಗಾವಿ ಪಾಲಿಕೆ ಮೇಲಿನ ಧ್ವಜವನ್ನು ತೆಗೆಯಲು ಪ್ರಯತ್ನಿಸಿದರೆ, ಕೈ ಕಟ್ ಮಾಡುತ್ತೇವೆ ಎಂದು ಮಹಾರಾಷ್ಟ್ರ ಪ್ರತಿಪಕ್ಷದ ನಾಯಕ ರಾಮದಾಸ್ ಕದಂ ಅವರು ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ರಾಷ್ಟ್ರ ಪ್ರಶಸ್ತಿ ವಿಜೇತ ನಟಿ ತಾರಾ, ಮುಂಬೈ ಮೇಲೆ ಬೆರಳೆಣಿಕೆಯ ಉಗ್ರರು ದಾಳಿ ನಡೆಸಿದಾಗ ಈ ಎಂಇಎಸ್, ಶಿವಸೇನೆ ಎಲ್ಲಿಗ್ರಿ ಹೋಗಿತ್ತು. ನಮ್ಮ ನೆಲೆದಲ್ಲಿ ನಿಂತು, ನಮ್ಮ ಕೈಯನ್ನೇ ಕಟ್ ಮಾಡುವ ಹೇಳಿಕೆ ನೀಡುತ್ತಿರುವ ಎಂಇಎಸ್ ಹಾಗೂ ಶಿವಸೇನೆಗೆ ಕನ್ನಡಿಗರೇ ಕೈಕಾಲು ಮುರಿಯಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ರಾಮದಾಸ್ ಕದಂ ಹೇಳಿಕೆಗೆ ಕರ್ನಾಟಕದಾದ್ಯಂತ ವ್ಯಾಪಕ ಖಂಡನೆ, ಟೀಕೆ ಹಾಗೂ ಆಕ್ರೋಶ ವ್ಯಕ್ತವಾಗಿದೆ. ಇಂತಹ ಉದ್ಧಟತನ ಹೇಳಿಕೆ ನೀಡುವುದನ್ನು ಕೈಬಿಡಬೇಕು ಎಂದು ಕಸಪಾ ಅಧ್ಯಕ್ಷ ನಲ್ಲೂರು ಪ್ರಸಾದ್, ವಾಟಾಳ್ ನಾಗರಾಜ್, ಎಲ್ ಹನುಮಂತಯ್ಯ, ರೈತ ಮುಖಂಡ ಗೋಡಿಹಳ್ಳಿ ಚಂದ್ರಶೇಖರ್, ಕನ್ನಡ ವೇದಿಕೆಯ ಪ್ರಭಾಕರ ರೆಡ್ಡಿ, ಕಸಾಪ ಮಾಜಿ ಅದ್ಯಕ್ಷ ಚಂದ್ರಶೇಖರ್ ಪಾಟೀಲ್, ಮುಖ್ಯಮಂತ್ರಿ ಚಂದ್ರು ಆಗ್ರಹಿಸಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)