ತುಮರಿ ಸೇತುವೆ ಶೀಘ್ರ ನಿರ್ಮಾಣ, ಯಡಿಯೂರಪ್ಪ
ಶಿವಮೊಗ್ಗ, ಜ. 15 : ಸಾಗರ ತಾಲೂಕಿನ ಕರೂರು ಹೋಬಳಿಯ ಜನರ ಬಹುಕಾಲದ ಬೇಡಿಕೆಯಾದ ತುಮರಿ ಸೇತುವೆಯನ್ನು ಆದಷ್ಟು ಬೇಗ ನಿರ್ಮಿಸಲು 125 ಕೋಟಿರೂ ಬಿಡುಗಡೆ ಮಾಡುವುದಾಗಿ ಮುಖ್ಯಮಂತ್ರಿ ಡಾ ಬಿಎಸ್ ಯಡಿಯೂರಪ್ಪ ಹೇಳಿದರು.
ತಾಲ್ಲೂಕಿನ ಅಂಬಾರಗೋಡ್ಲು-ಕಳಸವಳ್ಳಿ ಕಡವಿನಲ್ಲಿ ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ ಆರಂಭಿಸಿರುವ ನೂತನ ಚೌಡೇಶ್ವರಿ ಲಾಂಚ್ ಓಡಾಟಕ್ಕೆ ಬುದವಾರ ಚಾಲನೆ ನೀಡಿ ಅವರು ಮಾತನಾಡಿದರು. ಫೆಬ್ರವರಿ ಕೊನೆಯೊಳಗೆ ಸೇತುವೆ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸುವುದಾಗಿ ತಿಳಿಸಿದರು.
ಹಲವಾರು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಇಲ್ಲಿನ ಜನರ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದ್ದು, ತಾಲ್ಲೂಕಿನ ಶಾಸಕರು ಶಿಫಾರಸ್ಸು ಮಾಡುವ ಎಲ್ಲಾ ಪ್ರಗತಿಪರ ಯೋಜನೆಗೆ ಮಂಜೂರಾತಿ ನೀಡುವ ಭರವಸೆಯನ್ನು ಈ ಸಂದರ್ಭದಲ್ಲಿ ಮುಖ್ಯಮಂತ್ರಿಯವರು ನೀಡಿದರು.
ಯೋಜನೆಯ ಅನುಷ್ಠಾನವನ್ನು ಕಾಲಮಿತಿಯೊಳಗೆ ಮುಗಿಸಲು ಎಲ್ ಎಂಡ್ ಟಿ ಯಂತಹ ಪ್ರಮುಖ ಕಂಪನಿಗಳಿಗೆ ಕಾಮಗಾರಿ ನಿರ್ವಹಣೆಯ ಹೊಣೆಯನ್ನು ವಹಿಸುವ ಅಭಿಪ್ರಾಯವನ್ನು ಅವರು ವ್ಯಕ್ತಪಡಿಸಿದರು. ಸ್ಥಳೀಯ ಅಭಿವೃದ್ಧಿಗೆ ಪೂರಕವಾಗಿ ಯೋಜನೆಗಳನ್ನು ರೂಪಿಸಿ ಬಜೆಟ್ನಲ್ಲಿ ಪ್ರಕಟಿಸಲು ಸಾಧ್ಯವಾಗುವಂತೆ ಆದಷ್ಟು ಶೀಘ್ರವಾಗಿ ಯೋಜನೆಯನ್ನು ಸರಕಾರಕ್ಕೆ ಸಲ್ಲಿಸುವಂತೆ ಶಾಸಕರಿಗೆ ಸೂಚನೆಯನ್ನು ನೀಡಿದರು.
(ದಟ್ಸ್
ಕನ್ನಡ
ವಾರ್ತೆ)