ದುರಾನಿ ಬಂಧನಕ್ಕೆ ಪಾಕ್ ಐಎಸ್ಐ ಆಗ್ರಹ
ಇಸ್ಲಾಮಾಬಾದ್, ಜ. 16 : ಕಸಬ್ ಪಾಕಿಸ್ತಾನದ ವ್ಯಕ್ತಿ ಎಂದು ಹೇಳಿಕೆ ನೀಡಿದ ಪಾಕಿಸ್ತಾನದ ಮಾಜಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಮಹಮೊದ್ ಅಲಿ ದುರಾನಿ ಅವರನ್ನು ಪಾಕಿಸ್ತಾನದಲ್ಲಿ ಖಳನಾಯಕನಂತೆ ಬಿಂಬಿಸುವ ಕೆಲಸ ಆರಂಭವಾಗಿದೆ. ಪಾಕಿಸ್ತಾನದಾದ್ಯಂತ ಅವರ ವಿರುದ್ದ ವ್ಯಾಪಕ ಟೀಕೆಗಳ ಸುರಿಮಳೆ ಸುರಿಯತೊಡಗಿವೆ. ಪಾಕಿಸ್ತಾನಕ್ಕೆ ದ್ರೋಹ ಬಗೆಯುತ್ತಿರುವ ದುರಾನಿ ಭಾರತ ಹಾಗೂ ಅಮೆರಿಕದ ಏಜಂಟ್ ರಂತೆ ವರ್ತಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತವಾಗತೊಡಗಿವೆ.
ಮುಂಬೈ ದಾಳಿಯಲ್ಲಿ ಸಿಕ್ಕಿಬಿದ್ದಿರುವ ಏಕೈಕ ಉಗ್ರ ಅಜ್ಮಲ್ ಅಮೀರ್ ಕಸಬ್ ಪಾಕಿಸ್ತಾದ ವ್ಯಕ್ತಿ ಎಂದು ದುರಾನಿ ಹೇಳಿಕೆ ನೀಡಿದ್ದರು. ಈ ಸುದ್ದಿ ಪಾಕಿಸ್ತಾನದ ಸರ್ಕಾರದ ಕಿವಿಗೆ ಬಿದ್ದ ತಕ್ಷಣ ದುರಾನಿ ಅವರನ್ನು ಪದಚ್ಯುತಗೊಳಿಸಲಾಯಿತು. ಈ ಹೇಳಿಕೆಗೆ ಪಾಕ್ ಪ್ರಧಾನಮಂತ್ರಿ ಯೂಸೆಫ್ ರಾಜಾ ಗಿಲಾನಿ ತೀವ್ರ ಆಕ್ಷೇಪ ಹಾಗೂ ಆಕ್ರೋಶ ವ್ಯಕ್ತಪಡಿಸಿ ದುರಾನಿ ಅಮಾನತ್ತಿಗೆ ಅದೇಶ ನೀಡಿದ್ದರು. ಇದಕ್ಕೂ ಮುಂಚೆ ದಾಳಿ ನಡೆದ ನಂತರ ತನಿಖೆ ನಡೆಸಿದ ಭಾರತ, ಪಾಕಿಸ್ತಾನ ಮೂಲದ ವ್ಯಕ್ತಿಗಳು ಮುಂಬೈ ದಾಳಿ ನಡೆಸಿರುವುದು ತನಿಖೆಯಿಂದ ಸ್ಪಷ್ಟವಾಗಿದೆ ಎಂದು ಹೇಳುತ್ತಲೇ ಬಂದಿದೆ.
ಪಾಕಿಸ್ತಾನ ಐಎಸ್ಐ ಅಂತೂ ದುರಾನಿ ವಿರುದ್ಧ ಉಗ್ರ ಕೆಂಗಣ್ಣಿ ಬೀರಿದ್ದು, ಜನವರಿ ಏಳರ ನಂತರ ದುರಾನಿ ವರ್ತನೆಯೇ ಬೇರೆಯಾಗಿದೆ. ಅವರು ಭಾರತ ಮತ್ತು ಅಮೆರಿಕದ ಏಜಂಟ್ ರಂತೆ ವರ್ತಿಸುತ್ತಿದ್ದಾರೆ. ಆದ್ದರಿಂದ ಅವರನ್ನು ಬಂಧಿಸಿ ತನಿಖೆ ನಡೆಸಬೇಕಾದ ಅಗತ್ಯವಿದೆ ಎಂದು ಪ್ರತಿಪಾದಿಸಿದೆ. ಇತ್ತೀಚೆಗೆ ಅವರ ಹೇಳಿಕೆ, ಮಾದ್ಯಮಗಳ ಸಂದರ್ಶನ ಹಾಗೂ ಸರ್ಕಾರದ ವಿರುದ್ಧ ಮಾತನಾಡುತ್ತಿರುವ ಅವರ ಕ್ರಮ ಅನೇಕ ಸಂದೇಹಗಳಿಗೆ ಕಾರಣವಾಗಿದೆ. ದುರಾನಿ ಅವರನ್ನು ವಿಚಾರಣೆಗೆ ಒಳಪಡಿಸಬೇಕು ಎಂದು ಪಾಕ್ ಅಧ್ಯಕ್ಷ ಆಸೀಫ್ ಅಲಿ ಜರ್ದಾರಿ ಅವರನ್ನು ಐಎಸ್ಐ ಒತ್ತಾಯಿಸಿದೆ.
(ದಟ್ಸ್
ಕನ್ನಡ
ವಾರ್ತೆ)
ನಾನು
ಬಲಿಪಶು
ಆಗಿದ್ದೇನೆ
:
ದುರಾನಿ