ಇನ್ನೆರಡು ವರ್ಷಗಳಲ್ಲಿ ಬೆಂಗಳೂರು ಚೇಂಜ್ : ಯಡಿಯೂರಪ್ಪ
ತುರುವೇಕೆರೆ, ಜ. 15 : ಟ್ರಾಫಿಕ್ ಸಂಕಷ್ಟಕ್ಕೆ ಪರಿಹಾರ ಹಾಗೂ ಕಾನೂನು ಸುವ್ಯವಸ್ಥೆಯನ್ನು ಇನ್ನಷ್ಟು ಬಿಗಿಗೊಳಿಸುವುದು ಸೇರಿದಂತೆ ಮುಂದಿನ ಎರಡು ವರ್ಷಗಳಲ್ಲಿ ಬೆಂಗಳೂರಿನ ಚಿತ್ರಣವನ್ನೇ ಬದಲಾಯಿಸಲಾಗುವುದು ಎಂದು ಮುಖ್ಯಮಂತ್ರಿ ಡಾ ಬಿ ಎಸ್ ಯಡಿಯೂರಪ್ಪ ಭರವಸೆ ನೀಡಿದರು.
ಪಟ್ಟಣದ ಸಿದ್ದರಾಮೇಶ್ವರ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಬಗ್ಗೆ ಈಗಾಗಲೇ ವಿವಿಧ ತಜ್ಞರಿಂದ ಸಲಹೆ ಸೂಚನೆಗಳನ್ನು ಪಡೆಯಲಾಗುತ್ತಿದ್ದು, ಶಾಶ್ವತ ಪರಿಹಾರ ನೀಡಲಿದ್ದೇವೆ ಎಂದರು. ಮುಂದಿನ ಐದು ವರ್ಷಗಳಲ್ಲಿ 5 ಸಾವಿರ ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಯ ಗುರಿ ಹೊಂದಲಾಗಿದೆ. ಈ ಮೂಲಕ ದಿನದ 24 ಗಂಟೆ ಕಾಲವೂ ನಿರಂತರ ವಿದ್ಯುತ್ ನೀಡಲು ಸರ್ಕಾರ ಸಾಕಷ್ಟು ಮುತುವರ್ಜಿ ವಹಿಸಲಾಗಿದೆ ಎಂದು ಹೇಳಿದರು.
ಸರ್ಕಾರವನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಲು ಪ್ರತಿಪಕ್ಷಗಳು ತೀವ್ರ ಹವಣಿಸತೊಡಗಿವೆ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು, ಜನತೆಯ ಆಶೀರ್ವಾದ ಇರುವವರೆಗೂ ಯಾರಿಂದಲೂ ಏನೂ ಮಾಡಿಕೊಳ್ಳಲು ಸಾಧ್ಯವಿಲ್ಲ ಎಂದು ತೀಕ್ಷ್ಣವಾಗಿ ಜೆಡಿಎಸ್ ಮುಖಂಡರು ಹಾಗೂ ಬಂಗಾರಪ್ಪ ಅವರಿಗೆ ತಿರುಗೇಟು ನೀಡಿದರು. ಸರ್ಕಾರದ ಖಜಾನೆ ಭರ್ತಿ ಇದೆ ಎಂದು ವಿಶ್ವಾಸದಿಂದ ನುಡಿದ ಯಡಿಯೂರಪ್ಪ, ಬಜೆಟ್ ನಲ್ಲಿ ನೀಡಿರುವ ಎಲ್ಲ ಭರವಸೆಗಳನ್ನು ಈಡೇರಿಸಲು ಸಾಧ್ಯವಾಗದಿದ್ದರೆ ರಾಜಕೀಯ ನಿವೃತ್ತಿ ತೆಗೆದುಕೊಳ್ಳುವೆ ಎಂದು ಸ್ಪಷ್ಟಪಡಿಸಿದರು.
ಸೊರಬದ ದಂಡಾವತಿ ಯೋಜನೆಗೆ ಸಂಬಂಧಿಸಿದಂತೆ ಬಂಗಾರಪ್ಪ ಹಾಗೂ ಕುಮಾರಸ್ವಾಮಿ ಅವರು ಯಡಿಯೂರಪ್ಪ ವಿರುದ್ಧ ಭಾರಿ ವಾಗ್ಧಾಳಿ ನಡೆಸಿದ್ದರು. ಬಂಗಾರಪ್ಪ ಅವರಂತೂ ಹಿಗ್ಗಾಮುಗ್ಗಾ ತರಾಟೆ ತೆಗೆದುಕೊಂಡು ಯಡಿಯೂರಪ್ಪ ಮೂರನೇ ದರ್ಜೆ ಮುಖ್ಯಮಂತ್ರಿ ಎಂದು ಜರಿದಿದ್ದರು.
(ದಟ್ಸ್ ಕನ್ನಡ ವಾರ್ತೆ)
ದಂಡಾವತಿ ಯೋಜನೆ ಕೈಬಿಡಿ : ಬಂಗಾರಪ್ಪ