ಹಂದಿ, ಮೀನು ಬೇಕು ಗೋಮಾಂಸ ಏಕೆ ಬೇಡ ?
ಹಗರಿಬೊಮ್ಮನಹಳ್ಳಿ, ಜ. 13 : ಹಂದಿ (ವರಾಹ) ವಿಷ್ಣುವಿನ ಅವತಾರ ಮತ್ತು ದೇವಕನ್ಯೆಯೊಬ್ಬಳು ಮತ್ಯ್ಯಕನ್ಯೆ ಎನ್ನುವುದು ನಮ್ಮ ಹಿಂದೂ ಸಂಪ್ರದಾಯ. ದೇವರು ಅವತರಿಸಿದ ಪ್ರಾಣಿಗಳನ್ನು ವಧಿಸುವುದು ಅಪರಾಧ ಎಂದಾದರೆ ಹಂದಿ ಮತ್ತು ಮೀನನ್ನು ತಿನ್ನುವುದರಲ್ಲಿ ತಪ್ಪಿಲ್ಲಾ, ಗೋವನ್ನು ತಿ೦ದರೇ ಮಾತ್ರ ಹೇಗೆ ತಪ್ಪಾಗುತ್ತದೆ ಎಂದು ಸಿಪಿಐ(ಎಂ) ಮುಖಂಡ ಜಿ ವಿ ಶ್ರೀರಾಮರೆಡ್ಡಿ ಪ್ರಶ್ನಿಸಿದ್ದಾರೆ.
"ಗೋ ಹತ್ಯೆ" ನಿಷೇಧಿಸಬೇಕೆಂದು ಬಿಜೆಪಿ ಮತ್ತು ಸಂಘ ಪರಿವಾರಗಳು ಬೊಬ್ಬೆ ಹೊಡೆಯುತ್ತಿದೆ. ಕಸಾಯಿಖಾನೆಯ ಮೇಲೆ ದಾಳಿ ನಡೆಸಿ ದೌರ್ಜನ್ಯ ನಡೆಸುತ್ತಿದೆ. ಯಡಿಯೂರಪ್ಪ ಸರ್ಕಾರ ಧಾರ್ಮಿಕ ಭಾವನೆಗಳನ್ನು ಕೆರಳಿಸಿ ಅಧಿಕಾರ ನಡೆಸುತ್ತಿದೆ. ಗೋ ಹತ್ಯೆಗೆ ನೀಡುವಷ್ಟು ಪ್ರಾಮುಖ್ಯತೆಯನ್ನು ಇವತ್ತು ಕೋಮು, ಜಾತಿ, ಭಾಷೆಯ ಹೆಸರಿನಲ್ಲಿ ನಡೆಯುತ್ತಿರುವ ಮಾನವ ಹತ್ಯೆ ತಡೆಯಲು ಇವರಿಗೆ ಸಮಯವಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಗೋವು ದೇವರ ವಾಹನವಾಗಿ ಮಾತ್ರ ಬಳಕೆಯಾಗಿರುವುದು ನಾವು ಕೇಳಿದ್ದೇವೆ. ಬಿಜೆಪಿ ಹಾಗೂ ಸಂಘ ಪರಿವಾರ ನಂಬಿರುವ ದೇವರಲ್ಲಿ ಯಾವೊಬ್ಬ ದೇವರೂ ಗೋವಿನ ಅವತಾರ ತಾಳಿರುವ ಕುರಿತು ಎಲ್ಲೂ ಕೇಳಿಲ್ಲ. ಆದರೆ, ದೇವರು ಅವತಾರ ತಾಳಿರುವ ಹಂದಿ ಹಾಗೂ ಮೀನುಗಳನ್ನು ತಿನ್ನಬಹುದಾದರೆ ಗೋ ಮಾಂಸ ಏಕೆ ತಿನ್ನಬಾರದು ಎಂದು ಪ್ರಶ್ನಿಸಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)