ಕಾಂಗ್ರೆಸ್ ಸೇರಲು ಯುವಕರಿಗೆ ಕೃಷ್ಣನ ಕರೆಯೋಲೆ!
ಬೆಂಗಳೂರು, ಜ.8:ಎಸ್ಸೆಸ್ಸೆಲ್ಸಿ ಮೂಲ ಅಂಕಪಟ್ಟಿ ಇದ್ದು ರಾಜಕೀಯ ಸೇರಬೇಕೆಂಬ ಆಸಕ್ತಿ ಇದೆಯಾ? ಹಾಗಿದ್ದರೆ ತಡಯಾಕೆ? ನೇರ ಕೆಪಿಸಿಸಿ ಕಚೇರಿಗೆ ಹೋಗಿ ಯುವ ಕಾಂಗ್ರೆಸ್ಸಿಗರಾಗಿ ನೋಂದಾಯಿಸಿಕೊಳ್ಳಿ. ಆದರೆ ನಿಮ್ಮ ವಯಸ್ಸು 35 ವರ್ಷಗಳನ್ನು ಮೀರಿರಬಾರದು!
ಹಾಗಂತ ನಾವು ಕರೆ ಕೊಡುತ್ತಿಲ್ಲ. ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ, ಶಾಸಕ ಕೃಷ್ಣ ಬೈರೇಗೌಡ ಅವರು ರಾಜಕೀಯ ಸೇರಲು ತುದಿಗಾಲಲ್ಲಿ ನಿಂತಿರುವ ಬಿಸಿರಕ್ತದ ಯುವಕರಿಗೆ ಕರೆ ನೀಡಿದ್ದಾರೆ. ಯುವಜನಾಂಗವನ್ನು ರಾಜಕೀಯದತ್ತ ಸೆಳೆಯಲು ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಸಮಿತಿ ಕಾರ್ಯ ಯೋಜನೆ ರೂಪಿಸಿದೆ. ಈ ಕುರಿತು ಎರಡು ದಿನಗಳ ಪ್ರತಿಭಾ ಶೋಧ ಕಾರ್ಯಕ್ರಮವನ್ನು ಕೆಪಿಸಿಸಿ ಕಚೇರಿಯಲ್ಲಿ ಹಮ್ಮಿಕೊಳ್ಳಲಾಗಿದೆ. ಯುವ ನೇತಾರ ರಾಹುಲ್ ಗಾಂಧಿಯನ್ನು ಆದರ್ಶವನ್ನಾಗಿಟ್ಟುಕೊಂಡು ಯುವ ರಾಜಕಾರಣಿಗಳನ್ನು ರೂಪಿಸುವುದು ನಮ್ಮ ಉದ್ದೇಶ ಎನ್ನುತ್ತಾರೆ ಸಮಿತಿಯ ಅಧ್ಯಕ್ಷ ಕೃಷ್ಣ ಭೈರೇಗೌಡ.
ರಾಜಕೀಯಕ್ಕೆ ಹಾಗೂ ಕಾಂಗ್ರೆಸ್ ಪಕ್ಷಕ್ಕೆ ಧುಮುಕಲು ಆಸಕ್ತಿ ಇರುವ 35ರೊಳಗಿನ ಯುವಕರು ಎಸ್ಸೆಸ್ಸೆಲ್ಸಿ ಅಂಕಪಟ್ಟಿಯೊಂದಿಗೆ ಜ.15 ಮತ್ತು 16ರಂದು ಕೆಪಿಸಿಸಿ ಕಚೇರಿಗೆ ಹೋಗಿ ಹೆಸರನು ನೋಂದಾಯಿಸಿಕೊಳ್ಳಬಹುದು. ಆ ಮೂಲಕ ರಾಜಕೀಯಕ್ಕೆ ಪಾದಾರ್ಪಣೆ ಮಾಡಬಹುದು.
ಪ್ರತಿಭಾವಂತರನ್ನು ರಾಜ್ಯ ಯುವ ಕಾಂಗ್ರೆಸ್ ಅಥವಾ ಜಿಲ್ಲಾ ಸಮಿತಿಗಳಲ್ಲಿ ಸೇರಿಸಿಕೊಳ್ಳಲಾಗುವುದು ಎಂದು ಕೃಷ್ಣಬೈರೇಗೌಡ ತಿಳಿಸಿದರು. ಕಾರ್ಯಕ್ರಮಕ್ಕೆ ಅಖಿಲ ಭಾರತ ಯುವ ಕಾಂಗ್ರೆಸ್ ಸಮಿತಿ ಅಧ್ಯಕ್ಷರು ಮತ್ತಿತರ ಪದಾಧಿಕಾರಿಗಳು ಆಗಮಿಸಲಿದ್ದಾರೆ. ಈಗಾಗಲೇ ಈ ಕಾರ್ಯಕ್ರಮ ಆಂಧ್ರಪ್ರದೇಶ ಮತ್ತು ತಮಿಳುನಾಡಿನಲ್ಲಿ ಯಶಸ್ವಿಯಾಗಿದೆ ಎಂದರು.
(ದಟ್ಸ್ ಕನ್ನಡ ವಾರ್ತೆ)