ಗುರುವಾರ ರಾಜ್ಯದಲ್ಲಿ ಮೊಹರಂ ರಜೆ
ಬೆಂಗಳೂರು, ಜ. 7 : ನಾಳೆ ಜನವರಿ 8 ಗುರುವಾರ ಮೊಹರಂ. ಕರ್ನಾಟಕ ಸರಕಾರದ ರಜಾ ದಿನ. ಕಚೇರಿ, ಬ್ಯಾಂಕು, ಜೀವವಿಮಾ ಕಚೇರಿ, ಶಾಲೆ ಕಾಲೇಜುಗಳಿಗೆ ಮತ್ತು ಸಾರ್ವಜನಿಕ ಸೇವಾ ಇಲಾಖೆಗಳಿಗೆ ರಜೆ.
ಪ್ರವಾದಿ ಮೊಹಮ್ಮದ್ ಮೊಮ್ಮಗ ಇಮಾನ್ ಹುಸೇನ್ ಹುತಾತ್ಮನಾದ ದಿನವನ್ನು ಶಿಯಾ ಮುಸ್ಲಿಮರು ಮೊಹರಂ ಎಂದು ಆಚರಿಸಿಕೊಳ್ಳುತ್ತಾರೆ. ಕ್ರಿ.ಶ. 680 ರ ಕರಬಾಲ ಯುದ್ದದಲ್ಲಿ ಸಾವನ್ನಪ್ಪಿದ್ದ ಇಮಾನ್ ಹುಸೇನ, ಪ್ರವಾದಿ ಮೊಹಮ್ಮದ್ ಅಳಿಯ ಆಲಿ ಮತ್ತು ಆಲಿ ಸೋದರ ಹಸನ್ ಅವರನ್ನು ಈ ದಿನ ಸ್ಮರಿಸಿಕೊಳ್ಳುತ್ತಾರೆ ಎಂದು ಇತಿಹಾಸದ ಪುಟಗಳಲ್ಲಿ ಹೇಳಲಾಗಿದೆ.
ಮುಸಲ್ಮಾನರಿಗೆ, ಮೊಹರಂನೊಂದಿಗೆ ವರ್ಷ ಆರಂಭವಾಗುತ್ತದೆ. ವರ್ಷದ ಮೊದಲ ತಿಂಗಳು ಎಲ್ಲಾ ಶಿಯಾ ಮುಸ್ಲಿಮರು ಯಾವುದೇ ಸಂತೋಷಾಚರಣೆ ನಡೆಸದೆ ಹುತಾತ್ಮರಿಗೆ ಸಂತಾಪ ಸೂಚಿಸುತ್ತಾರೆ. ಹತ್ತು ದಿವಸ ಕಾಲ ಈ ಈದ್ ಸಾಗುತ್ತದೆ. ಧಾರ್ಮಿಕ ಸಭೆಗಳನ್ನು ನಡೆಸುವುದು, ಮೆರವಣಿಗೆ ಮಾಡುವುದು ಆಚರಣೆಗಳ ಒಂದು ಭಾಗವಾಗಿರುತ್ತದೆ.
ಪ್ರವಾದಿ ಮೊಹಮ್ಮದ್ ಹುತಾತ್ಮನಾದ ನಂತರ ಮುಸಲ್ಮಾನರು "ಕುರಾನ್" ಅನ್ನು ತಮ್ಮ ಶ್ರೇಷ್ಠ ಗ್ರಂಥವೆಂದು ಹಾಗೂ ಪ್ರವಾದಿ ಮೊಹಮ್ಮದ್ ಅವರು ತಮ್ಮ ಸರ್ವಶ್ರೇಷ್ಠ ಗುರುಗಳು ಮತ್ತು ಇವರಿಗೆ ಯಾರೂ ಉತ್ತರಾಧಿಕಾರಿ ಇಲ್ಲವೆಂದು ತೀರ್ಮಾನಿಸಿದರು.
ಭಾರತದಲ್ಲಿ ಅಂದು ಚಂದ್ರನ ದರ್ಶನ ಆದಕೂಡಲೇ, ಎಲ್ಲರೂ ಕಪ್ಪು ಬಟ್ಟೆ ಧರಿಸಿ ಕುರಾನ್ ಪಠಿಸಿ, ಹುತಾತ್ಮನಾದ ಇಮಾನ್ ಹುಸೇನನಿಗೆ ಶ್ರದ್ದಾಂಜಲಿ ಅರ್ಪಿಸುತ್ತಾರೆ. ಆನಂತರ ಬಡವರಿಗೆ ಬಟ್ಟೆ, ದವಸಧಾನ್ಯ ವಿತರಿಸುತ್ತಾರೆ. ಭಾರತದಲ್ಲಿ ಶಿಯಾ ಪಂಗಡದವರು ಲಕ್ನೋ ನಗರದಲ್ಲಿ ಹೆಚ್ಚಾಗಿರುವುದರಿಂದ ಅಲ್ಲಿ ಮೊಹರಂ ಜೋರು.
(ದಟ್ಸ್ ಕನ್ನಡ ವಾರ್ತೆ)