ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಾಲ್ಡವೀಸಿಗೆ ರಾಧಿಕಾ ಕುಮಾರಣ್ಣ ಪ್ರವಾಸ

By Staff
|
Google Oneindia Kannada News

HDKumaraswamy and Radhika escaped to Maldives island
ಬೆಂಗಳೂರು, ಜ. 7 : ಜಾತ್ಯಾತೀತ ಜನತಾದಳದ ಅಧ್ಯಕ್ಷ ಮತ್ತು ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಹಾಗೂ ಚಲನಚಿತ್ರ ನಟಿ ರಾಧಿಕಾ ಅವರು ಒಟ್ಟಾಗಿ ಚಳಿಗಾಲದ ರಜಾಪ್ರವಾಸ ಕೈಗೊಂಡಿದ್ದಾರೆ ಎಂಬ ಸುದ್ದಿ ಕರ್ನಾಟಕದಲ್ಲಿ ಬುಧವಾರ ಬೆಳಗ್ಗೆ ಬಿರುಗಾಳಿ ಎಬ್ಬಿಸಿದೆ. ಅವರೀರ್ವರ ನಡುವೆ ಮಧುರವಾದ, ಆಪ್ತವಾದ ಗೆಳೆತನವಿದೆ ಎಂಬ ಜನಜನಿತ ಕುತೂಹಲಗಳಿಗೆ ಈ ಸುದ್ದಿ ಇನ್ನಷ್ಟು ರಂಗು ಬಳಿದಿದೆ.

ಆಗಿರುವುದಿಷ್ಟು : ಜನವರಿ 5ರಂದು ಸೋಮವಾರ ಅವರಿಬ್ಬರು ಬೆಂಗಳೂರಿನಿಂದ ಏರ್ ಇಂಡಿಯ ವಿಮಾನದಲ್ಲಿ ಮಾಲ್ಡವೀಸ್ ನ ಮಾಲೆ ದ್ವೀಪಕ್ಕೆ ಪ್ರಯಾಣ ಬೆಳೆಸಿದ್ದಾರೆ. ಪ್ರಯಾಣ ಮಾಡಿರುವುದಕ್ಕೆ ಪುರಾವೆ ಒದಗಿಸುವ ಏರ್ ಟಿಕೆಟ್ ಮತ್ತು ಬೋರ್ಡಿಂಗ್ ಪಾಸುಗಳನ್ನು ( 1A ಮತ್ತು 1C) ಯಾರೋ ಆಸಕ್ತರು ಮಂಗಳವಾರ ಮಾಧ್ಯಮ ಕಚೇರಿಗಳಿಗೆ ರವಾನಿಸಿದ್ದಾರೆ.

ಇವರಿಬ್ಬರೇ ದ್ಪೀಪ ಪ್ರವಾಸವನ್ನು ಏಕೆ ಕೈಗೊಂಡರು ಎಂಬ ಬಗ್ಗೆ ಕುಮಾರಸ್ವಾಮಿ ಅವರ ಕುಟುಂಬದಿಂದ ಮಾಹಿತಿಗಳು ದೊರೆತಿಲ್ಲ. ಏರ್ ಇಂಡಿಯಾ ಸಿಬ್ಬಂದಿಗಳ ಹೇಳಿಕೆ ಪ್ರಕಾರ 'ರಜಾ ಕಾಲ ಕಳೆಯುವುದಕ್ಕೆ ಜನ ನಿತ್ಯ ಮಾಲ್ಡವೀಸ್ ಗೆ ಹೋಗುತ್ತಾರೆ, ಅದರಲ್ಲೇನು ವಿಶೇಷವಿಲ್ಲ' ಎಂದಿದ್ದಾರೆ.

ಸೋಮವಾರ ಅವರಿಬ್ಬರೂ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಪ್ರತ್ಯೇಕ ಕಾರುಗಳಲ್ಲಿ ಬಂದಿಳಿದಿದ್ದಾರೆ. ಮೊದಲು ಕುಮಾರಸ್ವಾಮಿ ಚೆಕ್ ಇನ್ ಆದರು, ಆನಂತರ 15 ನಿಮಿಷಗಳಲ್ಲಿ ರಾಧಿಕಾ ಚೆಕ್ ಇನ್ ಆಗಿದ್ದಾರೆ. ಕುಮಾರಸ್ವಾಮಿ ಅವರು ಏರ್ ಇಂಡಿಯಾ ಸಿಬ್ಬಂದಿಗೆ ದೂರವಾಣಿ ಕರೆ ಮಾಡಿ ತಮ್ಮ ಹಾಗೂ ಇನ್ನೊಂದು ಪಿಎನ್ ಆರ್ ಸಂಖ್ಯೆಗಳಿಗೆ ಅಕ್ಕಪಕ್ಕದ ಆಸನ ನೀಡಬೇಕೆಂದು ಕೋರಿಕೊಂಡಿದ್ದಾರೆಂದು ಮೂಲಗಳು ತಿಳಿಸಿವೆ. ಅದರಂತೆ, ಎಚ್ ಡಿಕೆ ಅವರಿಗೆ 1C ಮತ್ತು ರಾಧಿಕಾ ಅವರಿಗೆ 1A ಆಸನಗಳನ್ನು ಕೊಡಲಾಗಿದೆ. ಮಧ್ಯಾನ್ಹ 3.30ಕ್ಕೆ ವಿಮಾನ ಹಾರಿಹೋಗಿದೆ.

ಕುಮಾರಸ್ವಾಮಿ ಮತ್ತು ರಾಧಿಕಾ ಅವರು ಜತೆಜತೆಯಾಗಿ ಓಡಾಡುತ್ತಿರುವುದು ಇದೇ ಮೊದಲ ಬಾರಿಯೇನಲ್ಲ. ಅನೇಕ ಬಾರಿ ಅವರು ಒಂದೇ ದಿವಸ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬೇರೆಬೇರೆ ಫ್ಲೈಟುಗಳಿಂದ ಆಗಮಿಸಿದ ಅನೇಕ ಉದಾಹರಣೆಗಳಿವೆ ಎಂದು ಬಿಐಎಎಲ್ ಸಿಬ್ಬಂದಿ ಹೇಳುತ್ತಾರೆ.

ಈ ಮಧ್ಯೆ, ಈಗ ಕುಮಾರಣ್ಣ ಮತ್ತು ರಾಧಿಕಾ ಎಲ್ಲಿದ್ದಾರೆ ಎಂಬುದು ಖಚಿತವಾಗಿಲ್ಲ. ರಮಣೀಯ ಮಾಲೆ ದ್ಪೀಪದ ಒಂದು ಹೋಟೆಲಿನಲ್ಲಿ ತಂಗಿದ್ದಾರೆಂದು ಹೇಳಲಾಗುತ್ತಿದ್ದರೂ ನಿಖರವಾದ ಸ್ಥಳದ ಬಗ್ಗೆ ಮಾಹಿತಿಗಳು ಲಭ್ಯವಾಗಿಲ್ಲ. ಇತ್ತೀಚೆಗೆ ನಡೆದ ಉಪಚುನಾವಣೆಗಳಿಗೆ ಪ್ರಚಾರ ಪ್ರವಾಸ ಕೈಗೊಂಡು ಬಳಲಿದ್ದ ಕುಮಾರಣ್ಣ ಸ್ವಲ್ಪ ಆರಾಮಾಗಿ ಕಾಲ ಕಳೆಯಲು ಸಿಟಿ ಇಂದ ಆಚೆ ಹೋಗಿದ್ದಾರೆ ಎಂದು ಜೆಡಿ ಎಸ್ಸಿನ ಕೇಂದ್ರ ಕಚೇರಿಯ ಕಾರ್ಯಕರ್ತರೊಬ್ಬರು ದಟ್ಸ್ ಕನ್ನಡಕ್ಕೆ ತಿಳಿಸಿದರು.

ಏನೇ ಆಗಲಿ. ಕುಮಾರ ಸ್ವಾಮಿ ಮತ್ತು ರಾಧಿಕಾ ಅವರ ಸ್ನೇಹ ಅವರರವರ ಖಾಸಗಿ ವಿಚಾರಗಳಾಗಿರುತ್ತವೆ. ಸ್ವತಂತ್ರ ಭಾರತದಲ್ಲಿ ಯಾರು ಎಲ್ಲಿಗೆ ಬೇಕಾದರೂ ಹೋಗುವುದಕ್ಕೆ ಹಕ್ಕಿದೆ. ಆದರೂನೂವೆ, ರಾಜಕೀಯ ಮತ್ತು ಚಲನಚಿತ್ರ ಕ್ಷೇತ್ರದಲ್ಲಿ ತೊಡಗಿಕೊಂಡಿರುವ ಹೆಸರಾಂತ ವ್ಯಕ್ತಿಗಳ ಖಾಸಗಿ ಸಂಬಂಧಗಳು ಮತ್ತು ಚಲನವಲನಗಳು ಹಾಗೂ ಚಟುವಟಿಕೆಗಳ ಮೇಲೆ ಒಂದು ಕಣ್ಣಿಡುವುದು ಜನರ ಜಾಯಮಾನವಾಗಿದೆ.

( ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X