ಪಾಂಡವಪುರದಲ್ಲಿ ಜ್ಯೂ. ವಾಲಿಬಾಲ್ ಮಹಾಭಾರತ
ಮಂಡ್ಯ, ಜ. 6 : ಮೂವತ್ತೈದನೇ ಅಖಿಲ ಭಾರತ ಕಿರಿಯರ ವಾಲಿಬಾಲ್ ಛಾಂಪಿಯನ್ ಫಿಪ್ ಪಂದ್ಯಾವಳಿಗಳು ಪಾಂಡವಪುರ ತಾಲೂಕಿನ ಚಿನಕುರಳಿ ಗ್ರಾಮದಲ್ಲಿ ನಡೆಯಲಿವೆ. ಜನವರಿ 11ರಿಂದ ಜನವರಿ 18ರವರೆಗೆ ನಡೆಯಲಿರುವ ರಾಷ್ಟ್ರೀಯ ಮಟ್ಟದ ಪಂದ್ಯಾವಳಿಯನ್ನು ಅಚ್ಚುಕಟ್ಟಾಗಿ ನಡೆಸಲು ಪಂದ್ಯಾವಳಿಯ ಆಯೋಜಕರು ಗ್ರಾಮದಲ್ಲಿ ಸಕಲ ಸಿದ್ಧತೆಗಳನ್ನು ಮಾಡುತ್ತಿದ್ದಾರೆ.
ವಾಲಿಬಾಲ್ ಕ್ರೀಡಾಕೂಟವನ್ನು ಆಯೋಜಿಸುತ್ತಿರುವವರು ಮೇಲುಕೋಟೆ ವಿಧಾನಸಭಾ ಕ್ಷೇತ್ರದ ಶಾಸಕ ಸಿ.ಎಸ್. ಪುಟ್ಟರಾಜು. ಶಾಸಕರ ಕುಟುಂಬದ ಒಡೆತನದಲ್ಲಿರುವ ಎಸ್ಟಿಜಿ ಗ್ರೂಪ್ ಸಂಸ್ಥೆ ಪ್ರಾಯೋಜಿಸುತ್ತಿರುವ ಈ ಕ್ರೀಡಾಕೂಟವು ಆದಿಚುಂಚನಗಿರಿ ಶ್ರೀ ಬಾಲಗಂಗಾಧರನಾಥ ಸ್ವಾಮಿಯವರ 65ನೇ ಹುಟ್ಟುಹಬ್ಬ ಸ್ಮರಣೆಗೆ ದ್ಯೋತಕವೂ ಆಗಿರುತ್ತದೆ.
ಕ್ರೀಡಾಕೂಟದಲ್ಲಿ ಭಾರತದ ನಾನಾ ಭಾಗಗಳಿಂದ ಆಗಮಿಸುವ ಒಟ್ಟು 48 ತಂಡಗಳು ಪಾಲ್ಗೊಳ್ಳಲಿವೆ. ಸುಮಾರು 800 ಕ್ರೀಡಾಪಟುಗಳು, 300 ತರಬೇತುದಾರರು ಪಂದ್ಯಾವಳಿಯಲ್ಲಿ ಭಾಗವಹಿಸುವ ನಿರೀಕ್ಷೆ ಇದೆ ಎಂದು ಪುಟ್ಟರಾಜು ಸೋಮವಾರ ತಿಳಿಸಿದರು. ಹೊನಲು ಬೆಳಕಿನಲ್ಲೂ ಪಂದ್ಯಗಳು ನಡೆಯಲಿವೆ. ಪಂದ್ಯದಲ್ಲಿ ಗೆಲುವು ಸಾಧಿಸುವ ತಂಡ ಹಾಗೂ ಅತ್ಯುತ್ತಮ ಕ್ರೀಡಾಪಟುಗಳಿಗೆ ಒಟ್ಟಾರೆಯಾಗಿ 50,000 ರೂಪಾಯಿ ನಗದು ಬಹುಮಾನಗಳನ್ನು ನೀಡಲಾಗುವುದು ಎಂದೂ ಅವರು ಹೇಳಿದರು.
(ದಟ್ಸ್ ಕನ್ನಡ ವಾರ್ತೆ)