ಹುತಾತ್ಮನ ಪತ್ನಿಯಾಗಿ ಹೆಮ್ಮೆ: ಕವಿತಾ ಕರ್ಕರೆ
ಮುಂಬೈ ಭಯೋತ್ಪಾದನೆ ನಂತರ ಪ್ರಥಮ ಬಾರಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಅವರು ಮಾತನಾಡಿದರು. ನವೆಂಬರ್ 26 ದೇಶದ ಮೇಲೆ ಉಗ್ರರು ಅಟ್ಟಹಾಸ ಮೆರೆದ ದಿನ. ಅದು ನನ್ನ ಪಾಲಿನ ಕರಾಳ ದಿನವೂ ಹೌದು. ನನ್ನ ಗಂಡ ಧೀರ ಅಧಿಕಾರಿ ಹೇಮಂತ್ ನನ್ನು ಕಳೆದುಕೊಂಡ ದಿನ ಎನ್ನಲಿಕ್ಕೆ ಮನಸ್ಸು ಹಾತೊರೆಯುತ್ತದೆ. ಆದರೆ, ಆತ ಮಾಡಿರುವ ಸಾಧನೆ ನೆನಪಿಸಿಕೊಂಡರೆ ಎಲ್ಲವೂ ಮರೆಯಾಗುತ್ತದೆ ಎಂದು ಕವಿತಾ ವಿವರಿಸಿದರು.
ನವೆಂಬರ್ 26 ರಂದು ನಡೆದ ಉಗ್ರರೊಂದಿಗೆ ಕಾಳಗದಲ್ಲಿ ಹೇಮಂತ್ ಗೆ ಬರೀ ಗಾಯವಾಗಿರಬಹುದು ಎಂದುಕೊಂಡಿದ್ದೆ. ವಿಷಯ ತಿಳಿದ ತಕ್ಷಣ ಆಸ್ಪತ್ರೆಯತ್ತ ದಾಪುಗಾಲಿಟ್ಟೆ, ಅದರೆ, ಹೇಮಂತ್ ನ ಎದೆಗೆ ಮೂರು ಗುಂಡು ಸೇರಿಕೊಂಡು ತೀವ್ರವಾಗಿ ಗಾಯಗೊಂಡ ಅವರು ಕೊನೆಯುಸಿರೆಳೆದಿದ್ದರು. ಆಗ ನನ್ನ ಕರುಳು ಕಿತ್ತು ಬಂದಿತು. ಮೂವರು ಮಕ್ಕಳು ಸೇರಿ ನನ್ನನ್ನು ಕೂಡ ನಡುನೀರಿನಲ್ಲಿ ಕೈಬಿಟ್ಟು ಹೋದನಲ್ಲ ಎಂದು ಕುಸಿದು ಕುಳಿತೆ. ಹಿರಿಯ ಮಗಳನ್ನು ಮದುವೆ ಮಾಡಿಕೊಟ್ಟಾಗಿದೆ. ಉಳಿದ ಇಬ್ಬರು ಮಕ್ಕಳ ಮುಂದಿನ ಜೀವನ ಹೇಗೆ ಎನ್ನುವುದೆ ನನಗೆ ಏಕೈಕ ಚಿಂತೆಯಾಗಿತ್ತು ಎಂದು ಹೇಳಿದರು.
ಮಾಲೇಗಾಂವ್ ಸ್ಫೋಟಕ್ಕೆ ಸಂಬಂಧಿಸಿದಂತೆ ಮಹತ್ವದ ವಿಷಯವನ್ನು ಬೇಧಿಸಿದ ಹೇಮಂತ್ ಕೆಲ ರಾಜಕೀಯ ನಾಯಕರಿಂದ ಭಾರಿ ಟೀಕೆಗೆ ಒಳಗಾಗಿದ್ದರು. ಆದರೆ ಹೇಮಂತ್ ಎಂದಿಗೂ ತನ್ನ ಸಮಸ್ಥಿತಿಯನ್ನು ಕಳೆದುಕೊಂಡವರಲ್ಲ. ದೇವರ ಮೇಲೆ ಅಪಾರ ಭಕ್ತ ಹಾಗೂ ಪ್ರೀತಿ ಹೊಂದಿದ್ದ ಕರ್ಕರೆ, ಎಲ್ಲವನ್ನೂ ದೇವರೇ ನೋಡಿಕೊಳ್ಳತ್ತಾನೆ ಎಂದು ಹೇಳುತ್ತಿದ್ದರು.
ಮಾಲೇಗಾಂವ್ ಸ್ಫೋಟ ಘಟನೆಯಲ್ಲಿ ಕೆಲ ಹಿಂದೂ ಧಾರ್ಮಿಕ ಮುಖಂಡರು ಇರುವುದು ಪ್ರಕರಣದಿಂದ ತಿಳಿಯಿತು. ಇದನ್ನು ಹೊರಗೆಡವುತ್ತಿದ್ದಂತೆಯೇ ಕಲ ಹಿಂದೂ ಸಂಘಟನೆಗಳು ಅವರ ವಿರುದ್ಧ ಅಪಪ್ರಚಾರ ಮಾಡಿದರು. ಆಗ ಅವರು ಸ್ವಲ್ಪ ಧೃತಿಗೆಟ್ಟಿದ್ದರು. ಆಗ ನಾನೇ ಮುಂದೆ ನಿಂತು ಅವರನ್ನು ಹುರುದುಂಬಿಸಿದೆ. ಅವರ ಹತ್ತಿರ ಸಾಕ್ಷಿಗಳಿದ್ದವು, ತನಿಖೆಗೆ ಸರ್ಕಾರ ಅಗತ್ಯ ನೆರವು ನೀಡಿತು. ಈ ಎಲ್ಲ ಕಾರಣಗಳಿಂದ ತನಿಖೆ ನಿರಾತಂಕವಾಗಿ ಮುಗಿಸಿ ಆರೋಪಿಗಳನ್ನು ಬಂಧಿಸಲು ಹೇಮಂತ್ ಕರ್ಕರೆ ಯಶಸ್ವಿಯಾದರು ಎಂದು ಕವಿತಾ ತಿಳಿಸಿದರು.
(ದಟ್ಸ್ ಕನ್ನಡ ವಾರ್ತೆ)