ರಾಷ್ಟ್ರವ್ಯಾಪಿ ಲಾರಿ ಸಂಪು, ಸರಕು ಸಾಗಣೆ ಅಸ್ತವ್ಯಸ್ತ
ಬೆಂಗಳೂರು, ಜ. 5 : ಕರ್ನಾಟಕ ಸೇರಿದಂತೆ ದೇಶದೆಲ್ಲೆಡೆ ಭಾನುವಾರ ಮಧ್ಯರಾತ್ರಿಯಿಂದ ಸರಕು ಸಾಗಣಿ ವಾಹನ ಮಾಲೀಕರು ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಿದ್ದಾರೆ. ಹೀಗಾಗಿ ಜ 5 ರಿಂದ ತೈಲ , ಆಹಾರ ಪದಾರ್ಥಗಳು, ಹಣ್ಣು ಹಂಪಲು, ಮರಳು, ಜಲ್ಲಿ, ಕಬ್ಬಿಣ, ಸಿಮೆಂಟ್ ಸೇರಿದಂತೆ ಯಾವುದೇ ಸರಕು ಸಾಗಣಿ ವಾಹನಗಳು ರಸ್ತೆಗೆ ಇಳಿಯುವುದಿಲ್ಲ. ಆದರೆ ಹಾಲು, ನೀರು, ತರಕಾರಿ ಹಾಗೂ ಔಷಧ ಇತ್ಯಾದಿ ಅಗತ್ಯ ವಸ್ತು ಸರಬರಾಜು ಮಾಡುವ ಲಾರಿಗಳಿಗೆ ಮಾತ್ರ ಮುಷ್ಕರದಿಂದ ವಿನಾಯಿತಿ ನೀಡಲಾಗಿದೆ.
ಡಿಸೇಲ್, ಟೈರ್ ನ ಬೆಲೆ ಇಳಿಸುವುದೂ ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಅಖಿಲ ಭಾರತ ಮೋಟಾರ್ ಟ್ರಾನ್ಸ್ ಪೋರ್ಟ್ ಕಾಂಗ್ರೆಸ್ ನೇತತ್ವದಲ್ಲಿ ದೇಶವ್ಯಾಪಿ ಈ ಮುಷ್ಕರ ನಡೆಯುತ್ತಿದೆ. ದೇಶದೆಲ್ಲೆಡೆ ಸುಮಾರು 50 ಲಕ್ಷ ಸರಕು ಸಾಗಣಿ ವಾಹನಗಳು ಭಾಗವಹಿಸುತ್ತಿದ್ದು, ಬಹುತೇಕ ಎಲ್ಲ ಲಾರಿ ಸಂಘಚನೆಗಳೂ ಮುಷ್ಕರಕ್ಕೆ ಬೆಂಬಲ ನೀಡಿವೆ. ಕರ್ನಾಟಕದಲ್ಲಿ ರಾಜ್ಯ ಲಾರಿ ಮಾಲೀಕರು ಹಾಗೂ ಏಜಂಟರ ಸಂಘಗಳ ಒಕ್ಕೂಟ ಹಾಗೂ ಸರಕು ಸಾಗಣಿದಾರರ ಸಂಘದ ನೇತೃತ್ವದಲ್ಲಿ ಮುಷ್ಕರ ನಡೆಯುತ್ತಿದೆ.
(ದಟ್ಸ್ ಕನ್ನಡ ವಾರ್ತೆ)